ADVERTISEMENT

ಸ್ಥಳೀಯ ಸಂಸ್ಕೃತಿ ಜತೆ ರಂಗಾಯಣ ಕಟ್ಟುವ ಬಯಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:25 IST
Last Updated 15 ಸೆಪ್ಟೆಂಬರ್ 2011, 6:25 IST

ಶಿವಮೊಗ್ಗ: ಸ್ಥಳೀಯ ಸಂಸ್ಕೃತಿ, ಜಾನಪದ ಕಲೆ ಜತೆ ದೇಸಿ ಚಿಂತನೆಯ ನೆಲೆಯಲ್ಲಿ ಶಿವಮೊಗ್ಗ ರಂಗಾಯಣ ಕಟ್ಟುವ ಉದ್ದೇಶವಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನಾ. ಸತ್ಯ ಪ್ರಕಟಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ರಂಗಾಯಣಕ್ಕೆ ಸ್ವತಂತ್ರ ಅಸ್ತಿತ್ವ ಇದ್ದು, ಇದು ಮೈಸೂರಿನ ರಂಗಾಯಣದ ಉಪಘಟಕ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಹೊಸದಾಗಿ ಶಿವಮೊಗ್ಗ, ಧಾರವಾಡ ರಂಗಾಯಣಗಳನ್ನು ಪ್ರಕಟಿಸಿದ್ದು, ಮೈಸೂರಿನ ರಂಗಾಯಣದ ಅನುಭವದ ಆಧಾರದ ಮೇಲೆ ಶಿವಮೊಗ್ಗ, ಧಾರವಾಡಕ್ಕೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರಚಿಸುತ್ತಿದೆ. ಹಾಗೆಯೇ, ಸರ್ಕಾರ, ಈ ರಂಗಾಯಣಕ್ಕೆ ಸಲಹಾ ಸಮಿತಿ ರಚಿಸಲಿದೆ.

ಮಾರ್ಗದರ್ಶಿ  ಸೂತ್ರ ಹಾಗೂ ಸಲಹಾ ಸಮಿತಿ ರಚನೆಗೊಂಡ  ನಂತರವಷ್ಟೇ  ಶಿವಮೊಗ್ಗ  ರಂಗಾಯಣದ  ರೂಪುರೇಷೆಗಳ ಬಗ್ಗೆ ನಿರ್ದಿಷ್ಟವಾಗಿ ಚಿಂತನೆ ನಡೆಸಲು ಸಾಧ್ಯ ಎಂದರು.

ಸರ್ಕಾರದ ಆಪೇಕ್ಷೆ ಬಿಟ್ಟು ತಾವು ಬೇರೆ ಏನೂ ಮಾಡಲು ಸಾಧ್ಯವಿಲ್ಲ ಎಂದ ಅವರು, ತಾವು 25 ವರ್ಷಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದು, ವಿಶೇಷವಾಗಿ ಮಕ್ಕಳ ರಂಗಭೂಮಿ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.

ಮಕ್ಕಳ ರಂಗಭೂಮಿ ಜತೆ ಶಾಲಾ-ಕಾಲೇಜಿನ ಯುವಕ- ಯುವತಿಯರಿಗೆ ತರಬೇತಿ ನೀಡಿ, ಅವರಿಂದ ಪ್ರಯೋಗಗಳನ್ನು ನಡೆಸಲಾಗುವುದು. ಹಾಗೆಯೇ, ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ, ಅಂತರರಾಷ್ಟ್ರೀಯ ನಾಟಕೋತ್ಸವಗಳನ್ನು ಶಿವಮೊಗ್ಗಕ್ಕೂ ಕರೆತಂದು ಪ್ರದರ್ಶನ ಏರ್ಪಡಿಸುವ ಪ್ರಯತ್ನ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ನೀನಾಸಂ, ಕುವೆಂಪು ವಿಶ್ವವಿದ್ಯಾಲಯ, ಕುಪ್ಪಳಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತಿತರ ಸಂಸ್ಥೆಗಳಿದ್ದು, ಅವುಗಳ ಸಲಹೆ-ಸಹಕಾರ ಪಡೆದುಕೊಳ್ಳಲಾಗುವುದು ಎಂದರು.

ರಂಗಾಯಣ ಕಟ್ಟುವ ಬಗ್ಗೆ ಕಾರಂತರು ಭೋಪಾಲ್‌ನಲ್ಲಿ ಮಾಡಿದ ಕೆಲಸ ಹಾಗೂ ಚಂಡಿಘಡದಲ್ಲಿರುವ ರಂಗಭೂಮಿ ನಮ್ಮ ಮುಂದಿನ ಆದರ್ಶಗಳು. ಶಿವಮೊಗ್ಗ ರಂಗಾಯಣ ಕಟ್ಟುವ ಬಗ್ಗೆ ಕಲಾವಿದರು, ತಂತ್ರಜ್ಞರು, ನಾಗರಿಕರ ಸಲಹೆ-ಸಹಕಾರಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು ಎಂದರು.

ರಂಗಾಯಣ ಕಾರ್ಯಾಲಯವನ್ನು ಕನ್ನಡ ಸಂಸ್ಕೃತಿ ಭವನದಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತದ ಅನುಮತಿ ಬೇಕು. ಸದ್ಯಕ್ಕೆ ಕುವೆಂಪು ರಂಗಮಂದಿರದಲ್ಲಿ ಸ್ಥಳಾವಕಾಶ ಮಾಡಿಕೊಳ್ಳಲಾಗಿದೆ ಎಂದರು.

ಈಗಿರುವ ಜಿಲ್ಲಾ ಕಾರಾಗೃಹದ 46 ಎಕರೆ ಜಾಗದಲ್ಲಿ 3 ಎಕರೆ ಜಾಗವನ್ನು ರಂಗಾಯಣಕ್ಕೆ ನೀಡಿ ಎನ್ನುವುದು ನಮ್ಮ ಬೇಡಿಕೆ. ಸಲಹಾ ಸಮಿತಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ `ನನ್ನ ಕನಸಿನ ಶಿವಮೊಗ್ಗ~ದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯದರ್ಶಿ ಅ.ನಾ. ವಿಜಯೇಂದ್ರರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.