ADVERTISEMENT

ಹಕ್ಕುಪತ್ರ ಕಡ್ಡಾಯ: 17ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 5:45 IST
Last Updated 13 ಜುಲೈ 2012, 5:45 IST

ತೀರ್ಥಹಳ್ಳಿ: ಬಡವರಿಗೆಹಕ್ಕುಪತ್ರ ಕಡ್ಡಾಯ ಗೊಳಿಸಿರುವುದರಿಂದ ನಿವೇಶನ ನೀಡಲು ಗ್ರಾಮ ಪಂಚಾಯ್ತಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಮನೆಯನ್ನು ಕೊಡದೇ ಹಕ್ಕುಪತ್ರ ಕೇಳುತ್ತಿದೆ. ಇದರಿಂದ ಅರ್ಹ ಬಡ ಫಲಾನುಭವಿಗಳು ಆಶ್ರಯ ಮನೆ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಎಂದು ಮೇಲಿನಕುರುವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಟಿ. ಅನಿಲ್ ಆರೋಪಿಸಿದ್ದಾರೆ.

ಇಂಥ ನಿಯಮ ಬೇರೆ ಪ್ರದೇಶದಲ್ಲಿ ಇಲ್ಲ. ಕೇವಲ ಡಿಮ್ಯಾಂಡ್ ಆಧರಿಸಿ ನಿವೇಶನ ನೀಡಲಾಗುತ್ತಿದೆ. ಇಲ್ಲಿ ಮಾತ್ರ ಹಕ್ಕುಪತ್ರ ಬೇಕು ಎನ್ನುತ್ತಾರೆ. ಇದರಿಂದಾಗಿ ಸರ್ಕಾರ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ನೀಡುತ್ತಿರುವ ್ಙ 50 ಸಾವಿರ ಹಣ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಮನೆ ರಿಪೇರಿ ವ್ಯವಸ್ಥೆ ಈಗ ಇಲ್ಲದಾಗಿದೆ. ಬೇರೆ ತಾಲ್ಲೂಕುಗಳಲ್ಲಿ ಮನೆ ನಿರ್ಮಿಸಿಕೊಳ್ಳುಲು ಅವಕಾಶವಿದೆ. ನಮ್ಮ ತಾಲ್ಲೂಕಿನಲ್ಲಿ ಇಲ್ಲ. ಅದಕ್ಕೆ ಸರ್ಕಾರವೇ ಉತ್ತರಿಸಬೇಕು. ಬಡವರು ಮನೆ ನಿರ್ಮಿಸಿಕೊಳ್ಳಲು ತಾಲ್ಲೂಕಿಗೆ ಬಂದ ಕೋಟ್ಯಂತರ ಹಣ ಕೇವಲ ಕಾನೂನಿನ ತೊಡಕಿನಿಂದಾಗಿ ವಾಪಸ್ ಹೋಗುತ್ತಿದೆ. ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಚಿಂತನೆ ನಡೆಸುತ್ತಿಲ್ಲ. ಪರಿಹಾರ ಸೂತ್ರಗಳನ್ನು ತಿಳಿಸುತ್ತಿಲ್ಲ ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಮನೆ ಫಲಾನುಭವಿಗಳಿಗೆ ಬಸವ ಮತ್ತು ಇತರ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡಿದ್ದು, ಸರ್ಕಾರವು ಮನೆ ಫಲಾನುಭವಿಗಳಿಗೆ ಹಕ್ಕುಪತ್ರ ಕಡ್ಡಾಯ ಎಂದು ತಿಳಿಸಿದ್ದರಿಂದ 135 ಬಸವ ವಸತಿ ಫಲಾನುಭವಿಗಳಲ್ಲಿ ಸುಮಾರು 120ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಅನಿಲ್ ತಿಳಿಸಿದ್ದಾರೆ.

ಸಂಧ್ಯಾ ಸುರಕ್ಷಾ, ವಿಧವಾ ವೇತನ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಫಲಾನುಭವಿಗಳು ಪ್ರತಿನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಸರಿಯಾದ ಮಾಹಿತಿಯನ್ನೂ ನೀಡದೇ ಅಲೆದಾಡಿಸಲಾಗುತ್ತಿದೆ. 

ಸರ್ಕಾರದ ಈ ಗೊಂದಲ ನೀತಿಯನ್ನು ಖಂಡಿಸಿ ಜುಲೈ 17ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14ನೇ ಮಲೈಲಿಕಲ್ಲಿನ ಕಡಿದಾಳ್ ಮಂಜಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮ ಪಂಚಾಯ್ತಿ ಸಮರ್ಥವಾಗಿ ಬಳಸಿಕೊಂಡಿದ್ದು, 94 ಕಾಮಗಾರಿಗಳನ್ನು ನಿರ್ವಹಿಸಿ ಸುಮಾರು ಒಂದು ಕೋಟಿಗೂ ಹೆಚ್ಚು ಹಣವನ್ನು ಬಳಸಿಕೊಳ್ಳಲಾಗಿದೆ. ಉದ್ಯೋಗ ಖಾತ್ರಿ ಹಾಗೂ ಇತರ ಯೋಜನೆಗಳ ಅನುಷ್ಠಾನದಲ್ಲಿ ತಾಲ್ಲೂಕಿಗೇ ಮೇಲಿನಕುರುವಳ್ಳಿ ಪ್ರಥಮ ಸ್ಥಾನದಲ್ಲಿದೆ. ಅದನ್ನು ತಾಲ್ಲೂಕು ಆಡಳಿತ ಗುರುತಿಸದೇ ಬೇರೆ ಪಂಚಾಯ್ತಿಯನ್ನು ಉತ್ತಮ ಪಂಚಾಯ್ತಿ ಎಂದು ಗುರುತಿಸಿ ಗೌರವಿಸಲಾಗಿದೆ. ಇದು ಸ್ವಚ್ಛ ಆಡಳಿತ ಹಾಗೂ ಪ್ರಗತಿ ಸಾಧಿಸಿದ ಗ್ರಾಮ ಪಂಚಾಯ್ತಿಗಳಿಗೆ ನೋವುಂಟು ಮಾಡುವ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನಸಂಖ್ಯೆ ಹೆಚ್ಚಿದೆ. ಜನರು ಬೀದಿಯಲ್ಲಿ ಇದ್ದಾರೆ. ಬಹುತೇಕ ಬಡವರೇ ಇರುವ ಗ್ರಾಮ ಪಂಚಾಯ್ತಿಯಲ್ಲಿ ಮನೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಒತ್ತಡ ಹೇರುತ್ತಿದ್ದಾರೆ. ಬಡವರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ರಾಜ್ಯದ ಗಮನಸೆಳೆದ ಇತರ ಪಂಚಾಯ್ತಿಗಳ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳವ ಸಲುವಾಗಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಅಲ್ಲಿನ ಪಂಚಾಯ್ತಿಗಳಲ್ಲಿ ಹಕ್ಕುಪತ್ರ ಕಡ್ಡಾಯ ಮಾಡಿಲ್ಲ. ಇಂಥ ಗೊಂದಲಗಳು ಅಲ್ಲಿ ಕಂಡು ಬಂದಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹೇಶ್‌ಶೆಟ್ಟಿ, ಸದಸ್ಯರಾದ ನಾಗರತ್ನಾ, ಪವಿತ್ರಾ, ಅನಿತಾ, ಗೋಪಾಲಪೂಜಾರಿ, ಪ್ರಭಾಕರ, ಯು.ಡಿ. ವೆಂಕಟೇಶ್ ಮುಂತಾದವರು ಹಾಜರಿದ್ದರು. 

 ಸ್ಪಂದಿಸಲು ಆಗ್ರಹ
ತಾಲ್ಲೂಕಿನಾದ್ಯಂತ ಅಡಿಕೆ ಬೆಳೆಗೆ ಹಳದಿರೋಗ, ಹಿಡಿಮುಂಡಿ ರೋಗ, ಬೇರುಹುಳು, ಕೊಳೆರೋಗ ಹಾಗೂ ಪ್ರಕೃತಿ ವೈಪರೀತ್ಯದಿಂದ ಅಡಿಕೆ ಬೆಳೆ ಶೇ 80, 90ರಷ್ಟು ನಷ್ಟವಾಗಿದ್ದು, ರೈತ ಸಮೂಹ ಸಂಕಷ್ಟ ಎದುರಿಸುತ್ತಿದೆ. ಸರ್ಕಾರ ತಕ್ಷಣ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ರಾಜ್ಯ ರೈತ ಸಂಘದ ಮುಖಂಡರಾದ ಕೋಡ್ಲು ವೆಂಕಟೇಶ್, ಹೊರಬೈಲು ರಾಮಕೃಷ್ಣ ಹಾಗೂ ಇತರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಡಾ.ಗೋರಕ್ ಸಿಂಗ್ ವರದಿ ಅನುಷ್ಠಾನಕ್ಕೆ ಒತ್ತಾಯಿಸಿದ ಅವರು ಅಡಿಕೆ ಬೆಳೆಗಾರರ 2012ರ ವರೆಗಿನ ರಾಷ್ಟ್ರೀಕೃತ ಸಹಕಾರಿ ಬ್ಯಾಂಕ್ ಮತ್ತು ಅಡಕೆ ಬೆಳೆ ಷೇರುದಾರರ ಸಹಕಾರ ಸಂಘ ಸಂಸ್ಥೆಗಳಲ್ಲಿ ಮಾಡಿರುವ ಅಡಿಕೆ ಬೆಳೆಗಾರರ ಬಳೆ ಸಾಲ, ಅಭಿವೃದ್ಧಿ ಸಾಲವನ್ನು ಮಾನ್ನಾ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ಸರ್ಕಾರ ರಸಗೊಬ್ಬರದ ಬೆಲೆಯನ್ನು ವಿಪರೀತ ಹೆಚ್ಚಿಸಿ ರೈತರ ಕೈಗೆ ಎಟುಕದಂತೆ ಮಾಡಿದೆ. ರಸಗೊಬ್ಬರದ ಬೆಲೆಯನ್ನು ಆಧರಿಸಿ ಬತ್ತ, ರಾಗಿ ಮುಂತಾದ ಬೆಳೆಗಳ ಬೆಲೆಯನ್ನು ನಿಗದಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿ ಮಂಜೂರಾತಿಗಾಗಿ ಬಗರ್‌ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿ ದಶಕಗಳಿಂದ ಅಲೆಯುವಂತಾಗಿದೆ. ಸಾವಿರಾರು ಅರ್ಜಿಗಳು ವಿಲೇ ಆಗದೇ ಮೂಲೆ ಹಿಡಿದು ಕುಳಿತಿವೆ. ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ನಡೆಸಿ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಅವರು ಕೋರಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಕೈಕೊಟ್ಟಿದೆ. ಇಲ್ಲಿನ ಬರಗಾಲ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ನೀಡಿ ಕ್ರಮ ಕೈಗೊಳ್ಳಬೇಕು. ಮುಂದಿನ ಹೋರಾಟಕ್ಕೆ ಅವಕಾಶ ನೀಡಬಾರದು ಎಂದು ತಹಶೀಲ್ದಾರ್ ಅವರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.