ADVERTISEMENT

ಹಿಂದುಳಿದವರಿಗೆ ನೆರವು ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 11:20 IST
Last Updated 18 ಜನವರಿ 2011, 11:20 IST

ಭದ್ರಾವತಿ: ‘ಸಮಾಜ ಮೇಲ್ವರ್ಗದಲ್ಲಿದ್ದರೂ ಜನರು ಮಾತ್ರ ಆರ್ಥಿಕವಾಗಿ ಬಡವರಾಗಿರುತ್ತಾರೆ.ಇಂತಹ ಸಮಾಜದ ಬಂಧುಗಳಿಗೆ ನೆರವಿನ ಆವಶ್ಯಕತೆ ಇದೆ’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು.ಇಲ್ಲಿನ ಹಳೇನಗರ ರಾಮೇಶ್ವರ ದೇವಾಲಯದಲ್ಲಿ ಭಾನುವಾರ ವಿಪ್ರ ಯುವ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆ, ಬುದ್ಧಿವಂತಿಕೆ ಹಾಗೂ ಜ್ಞಾನದಮಟ್ಟದಲ್ಲಿ ಈ ಸಮಾಜ ಉನ್ನತಿಯಲ್ಲಿದೆ. ಆದರೆ, ಆರ್ಥಿಕವಾಗಿ ಈ ಸಮಾಜದ ಅನೇಕರು ಬಲಹೀನರಾಗಿದ್ದಾರೆ. ಇವರ ನೆರವಿಗೆ ವೇದಿಕೆ ಯುವಕರು ಕೆಲಸ ಮಾಡಲು ಮುಂದಾಗಿ ಎಂದು ಕರೆ ನೀಡಿದರು.ಶಿವಮೊಗ್ಗ ಗಾಯತ್ರಿ ಪ್ರತಿಷ್ಠಾನ ಅಧ್ಯಕ್ಷ ಕೆ.ಎಸ್. ಅನಂತರಾಮಯ್ಯ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಖ್ಯೆಗೆ ಬೆಲೆ.
 
ನಮ್ಮ ಸಮಾಜದ ಜನಸಂಖ್ಯೆ ಕಡಿಮೆ ಇರುವ ಕಾರಣ ಯಾವುದೇ ರಾಜಕೀಯ ಪಕ್ಷ ನಮ್ಮತ್ತ ಗಮನ ನೀಡುವುದಿಲ್ಲ. ಅವರ ಗಮನ ಸೆಳೆಯುವ ಕೆಲಸ ಮಾಡುವ ಅಗತ್ಯವಿದೆ ಎಂದರು. ಎಲ್ಲಾ ಸಮಾಜ ಬಂಧುಗಳ ಜತೆ ಹೊಂದಾಣಿಕೆಯ ಬದುಕು ನಡೆಸಿರುವ ಬ್ರಾಹ್ಮಣ ಸಮಾಜ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿಯನ್ನು ಹೊಂದಿದೆ. ಇದಕ್ಕೆ ತಕ್ಕ ರೀತಿಯಲ್ಲಿ ಬೆಳೆಯುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ. ಈ ನಿಟ್ಟಿನಲ್ಲಿ ಯುವ ವೇದಿಕೆ ಕೆಲಸ ಮಾಡಲಿ ಎಂದು ಮನವಿ ಮಾಡಿದರು.

ಬಡಗನಾಡು ಸಂಘದ ಅಧ್ಯಕ್ಷ ವಿ.ಕೆ. ದೀಕ್ಷಿತ್, ಶಿವಮೊಗ್ಗ ವಿಪ್ರ ಸಮಾಜದ ಅಧ್ಯಕ್ಷ ನಾಗಭೂಷಣ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎಸ್. ಜನಾರ್ದನ ಅಯ್ಯಂಗಾರ್, ಯುವ ವೇದಿಕೆ ಅಧ್ಯಕ್ಷ ಸಿ. ರಂಗನಾಥ್ ಉಪಸ್ಥಿತರಿದ್ದರು.ಸಂಜನಾ ಎಸ್. ರಾವ್ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ವಸಂತ ಮಾಧವ ಸ್ವಾಗತಿಸಿದರು. ಕೆ.ಆರ್. ಸುಬ್ರಹ್ಮಣ್ಯ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.