ADVERTISEMENT

ಹೊರರಾಜ್ಯಗಳ ನಕ್ಸಲರ ಕಾರ್ಯಾಚರಣೆ:ಪರಿಶೀಲನೆ ನಂತರ ಸ್ಪಷ್ಟ: ಇನ್ಫಂಟ್

​ಪ್ರಜಾವಾಣಿ ವಾರ್ತೆ
Published 4 ಮೇ 2012, 8:05 IST
Last Updated 4 ಮೇ 2012, 8:05 IST

ಶಿವಮೊಗ್ಗ: ಕರ್ನಾಟಕದಲ್ಲಿ ಹೊರರಾಜ್ಯಗಳ ನಕ್ಸಲರು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಪರಿಶೀಲನೆ ನಂತರ ಸ್ಪಷ್ಟವಾಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಎ.ಆರ್. ಇನ್ಫಂಟ್ ತಿಳಿಸಿದರು.

ಪೊಲೀಸರ ಕಾರ್ಯಾಚರಣೆ ವೇಳೆ ತಮಿಳು ಭಾಷೆಯ ಕೆಲವು ಕರಪತ್ರಗಳು ಸಿಕ್ಕಿರುವುದು ನಿಜ. ಆದರೆ, ಅವರ ಕಾರ್ಯಾಚರಣೆ ಅಥವಾ ರಾಜ್ಯದ ನಕ್ಸಲರ ಜತೆಗಿನ ನಂಟಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ನಕ್ಸಲ್ ಚಟುವಟಿಕೆಗಳು ಪಕ್ಕದ ಕೇರಳಕ್ಕೂ ವಿಸ್ತರಿಸುತ್ತಿದೆ ಎಂಬ ವದಂತಿಗಳಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಸದ್ಯ 40 ನಕ್ಸಲರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದ ಅವರು, ಯಾವುದೇ ಕಾರಣಕ್ಕೂ ಎಡಪಂಥೀಯ ಉಗ್ರವಾದವನ್ನು ಸಹಿಸುವುದಿಲ್ಲ. ನಕ್ಸಲ್ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದರು.

ಸರ್ಕಾರ ನಕ್ಸಲ್ ಪ್ಯಾಕೇಜ್ ಜಾರಿಗೆ ತಂದಿದ್ದು, ನಕ್ಸಲೀಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕೆ ಪೊಲೀಸ್ ಇಲಾಖೆ ಜತೆ ಜನರ ಸಹಕಾರವೂ ಅಗತ್ಯ ಎಂದು ಹೇಳಿದರು.

ಈಚೆಗೆ ಐಜಿಪಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ಶಂಕರ ಬಿದರಿ ಅವರ ಪರವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಸಂಬಂಧಿಸಿದ ಮಾಧ್ಯಮಗಳ ಪ್ರಶ್ನೆಗೆ ಇನ್ಫಂಟ್ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.