ADVERTISEMENT

ಹೊಸನಗರ: ಅದ್ದೂರಿಯ ನಾಡಹಬ್ಬ ದಸರಾ ತೆರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:24 IST
Last Updated 1 ಅಕ್ಟೋಬರ್ 2017, 10:24 IST

ಹೊಸನಗರ: ತಾಲ್ಲೂಕು ಆಡಳಿತ, ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ಪಟ್ಟಣ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಅದ್ದೂರಿಯ ನಾಡ ಹಬ್ಬ ದಸರಾ ಸಂಭ್ರಮಕ್ಕೆ ಶನಿವಾರ ತೆರೆಬಿದ್ದಿತು. ವಿಜಯದ ದಶಮಿಯ ದಿನದಂದು ಗಣಪತಿ, ಜನಾರ್ದನ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಅದ್ದೂರಿ ನಡೆದ ಮೆರವಣಿಗೆಯಲ್ಲಿ ಕಲಾತಂಡಗಳು, ಪ್ರಮುಖರು ಪಾಲ್ಗೊಂಡಿದ್ದರು.

ಉತ್ಸವದ ಜತೆಯಲ್ಲಿ ಹುಲಿವೇಷ, ಕೀಲು ಕುದುರೆ, ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಪಂಚವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು. ಮೆರವಣಿಗೆಗೆ ಮೊದಲು ಮಿನಿ ವಿಧಾನ ಸೌಧದಲ್ಲಿ ಖಜಾನೆ ಪೂಜೆ, ಹೊಸ ವಾರ್ಷಿಕ ಜಮಾಬಂದಿ, ಲೆಕ್ಕಪತ್ರ ಆರಂಭದ ಖಾತೆಗಳಿಗೆ ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಚಾಲನೆ ನೀಡಿದರು.

ಪಟ್ಟಣದ ಹೊರ ವಲಯ ಯಡಚಿಟ್ಟೆ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಬನ್ನಿಮಂಟಪದಲ್ಲಿ ಕಲಾತಂಡಗಳ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ADVERTISEMENT

ತಹಶೀಲ್ದಾರ್ ಚಂದ್ರಶೇಖರ ನಾಯ್ಕ ವಿದ್ಯುಕ್ತವಾಗಿ ಬನ್ನಿ ಕಡಿದರು. ನಂತರ ಸ್ನೇಹ, ಶಾಂತಿ, ಸೌಹಾರ್ದದ ಸಂಕೇತವಾಗಿ ಪಟ್ಟಣದ ಪ್ರಮುಖರು ಹಾಗೂ ನಾಗರಿಕರು ಬನ್ನಿ ಪತ್ರೆಯನ್ನು ಪರಸ್ಪರ ವಿತರಿಸಿಕೊಂಡು ಶುಭ ಕೋರಿದರು.

ಸಮಿತಿ ಸದಸ್ಯರಿಗೆ ಸನ್ಮಾನ: ಆರು ದಶಕಗಳಿಂದ ನಾಡಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ನಾಡಹಬ್ಬ ಸಮಿತಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಪರವಾಗಿ ಅಧ್ಯಕ್ಷ ಹಾಲಗದ್ದೆ ಉಮೇಶ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ, ಉಪಾಧ್ಯಕ್ಷೆ ಸುಜಾತಾ ಉಡುಪ, ನಾಡಹಬ್ಬ ಸಮಿತಿಯ ಶ್ರೀಧರ ಉಡುಪ, ಶ್ರೀನಿವಾಸ ಕಾಮತ್, ಕೆ.ಎಸ್. ಕನಕರಾಜ, ಗಣೇಶ ಹೇಮಾಜಿ ರಾವ್ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.