ADVERTISEMENT

‘ಗೀತೆಯ ಸಾರ ಪ್ರತಿಯೊಬ್ಬರಿಗೂ ತಲುಪಲಿ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:41 IST
Last Updated 6 ಜನವರಿ 2014, 5:41 IST

ಶಿವಮೊಗ್ಗ: ಭಗವದ್ಗೀತೆ ಕೇವಲ ಹಿಂದೂಗಳಿಗೆ ಸೀಮಿತವಾಗಿರದೆ, ಪ್ರತಿಯೊಂದು ಜಾತಿ, ವ್ಯಕ್ತಿಯನ್ನು ತಲುಪಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಶುಭಮಂಗಳ ಸಮುದಾಯ ಭವನದಲ್ಲಿ ಭಾನುವಾರ ಸ್ವರ್ಣವಲ್ಲೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಾಗೂ  ಭಗವದ್ಗೀತಾ ಪುನಶ್ಚೇತನ ಅಭಿಯಾನ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಭಗವದ್ಗೀತಾ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಗವದ್ಗೀತೆ ಅಭಿಯಾನ ಇಡೀ ದೇಶದಲ್ಲಿ ನಡೆಯಬೇಕು. ಭಗವದ್ಗೀತೆ ಪಠಣದ ಮೂಲಕ ಜಾಗೃತಿ ಮೂಡಿದಾಗ ಮಾತ್ರ ಧ್ಯಾನ, ಭಕ್ತಿ ಮುಂತಾದ ಗುಣಗಳು ಮೈಗೂಡುತ್ತವೆ ಎಂದರು.

ಇಂದಿನ ಒತ್ತಡದ ಜೀವನ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿ, ಶಾಂತಿ–ನೆಮ್ಮದಿ ಪಡೆಯುವುದು ಕಷ್ಟವಾಗಿದೆ. ಆದ್ದರಿಂದ ಭಗವದ್ಗೀತೆ ಪಠಣ ಮಾಡುವ ಮೂಲಕ ಶಾಂತಿ–ಸಾಮರಸ್ಯದಿಂದ ಬಾಳಬೇಕಾಗಿದೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿಎಸ್ ವೈ, ಬಿಜೆಪಿ ಸೇರ್ಪಡೆ ಸಂತಸವನ್ನುಂಟು ಮಾಡಿದೆ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಗೋಹತ್ಯೆ ನಿಷೇಧ ಮಸೂದೆ ಜಾರಿ, ಮಠ–-ಮಾನ್ಯಗಳಿಗೆ ಸರ್ಕಾರದಿಂದ ಅನುದಾನ ಮುಂತಾದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ತಿಳಿಸಿದರು.

ಯಡಿಯೂರಪ್ಪ ಅವರು ಬಿಜೆಪಿಗೆ ಮಾರ್ಗದರ್ಶನ ಮಾಡುವ ಮೂಲಕ ಭಗವದ್ಗೀತೆಯಲ್ಲಿ ಬರುವ ಶ್ರೀಕೃಷ್ಣನಂತೆ ಬಿಎಸ್ ವೈ ಬಿಜೆಪಿ ಸಾರಥಿಯಾಗಿ ಮುನ್ನಡೆಸಲಿ ಎಂದು ಅಭಿಪ್ರಾಯಪಟ್ಟರು.

ಗೊೋವನ್ನು ಹಿಂದೂಗಳು ದೇವರ ಸ್ವರೂಪದಲ್ಲಿ ಪೂಜಿಸುತ್ತಾರೆ. ಆದರೆ, ಇಂದು ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋಮಾತೆಯ ರಕ್ಷಣೆಗೆ ಮುಂದಾಗಬೇಕಿದೆ ಎಂದು ಅವರುಹೇಳಿದರು.

ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ  ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜದ ಮಾನಸಿಕ ಸ್ಥಿತಿ ಹದಗೆಟ್ಟಿದ್ದು, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.

ಸೊರಬ ತಾಲ್ಲೂಕು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ತಾಳಗುಪ್ಪ ಕೂಡ್ಲಿ ಮಠದ ಸಿದ್ದವೀರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.  ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅ.ಪ.ರಾಮಭಟ್ಟ ಅಧ್ಯಕ್ಷತೆ ವಹಿಸಿದ್ದರು.  ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.