ADVERTISEMENT

‘ ಸಂಸ್ಕೃತ ಶ್ರೀಸಾಮಾನ್ಯನಿಗೂ ತಲುಪಲಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:45 IST
Last Updated 16 ಸೆಪ್ಟೆಂಬರ್ 2013, 8:45 IST

ಶಿವಮೊಗ್ಗ: ಸಂಸ್ಕೃತ ಭಾಷೆಯನ್ನು ಶ್ರೀಸಾಮಾನ್ಯನಿಗೂ ತಲುಪಿಸಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.

ನಗರದ ಬೆಕ್ಕಿನಕಲ್ಮಠದಲ್ಲಿ ಭಾನುವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕ ಸಂಘ, ಜಗದ್ಗುರು ಗುರು ಬಸವೇಶ್ವರ ಸಂಸ್ಕೃತ ಕಾಲೇಜು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತಿಹಾಸವನ್ನು ಗಮನಿಸಿದಾಗ ಸಂಸ್ಕೃತ ಒಂದು ವರ್ಗದ ಸ್ವತ್ತು ಎಂಬಂತೆ ಪರಿಗಣಿತವಾಗಿದ್ದು ತಿಳಿದುಬರುತ್ತದೆ. ಆದರೆ, ಯಾವ ಭಾಷೆ ಯಾರ ಸ್ವತ್ತೂ ಅಲ್ಲ. ಭಾಷೆ ಕಲಿಕಗೆ ಮುಕ್ತ ಅವಕಾಶ ಇರಬೇಕು. ಆದ್ದರಿಂದ ಪ್ರತಿಯೊಬ್ಬರಿಗೂ, ಪ್ರತಿಮನೆಯಲ್ಲೂ ಸಂಸ್ಕೃತ ಅಧ್ಯಯನ ನಡೆಸಲು ಅವಕಾಶ ಇರಬೇಕು ಎಂದು ತಿಳಿಸಿದರು.

ಸಂಸ್ಕೃತಕ್ಕೆ ಮಡಿವಂತರ ಭಾಷೆ ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಆದರೆ, ಇತ್ತೀಚೆಗೆ ಕೆಲ ಸಂಘಟನೆಗಳ ಪರಿಶ್ರಮದಿಂದ ಸಂಸ್ಕೃತ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ. ಮಠಗಳಲ್ಲೂ ಜಾತಿ ಭೇದವಿಲ್ಲದೆ ಎಲ್ಲರಿಗೂ ಸಂಸ್ಕೃತ ಕಲಿಸುತ್ತಿರುವುದು ಭಾಷೆಯ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಲಕ್ಷಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ದೇಶದಲ್ಲಿ ಇಂಗ್ಲೀಷ್ ಭಾಷೆ ವ್ಯಾಮೋಹ ಹೆಚ್ಚಿದೆ. ಶಿಕ್ಷಣ ಜ್ಞಾನಾರ್ಜನೆಯ ಉದ್ದೇಶದಿಂದ ನಡೆಯಬೇಕು.

ಸಂಸ್ಕೃತ ಕಲಿಕೆಯಿಂದ ಉತ್ತಮ ಜ್ಞಾನವೃದ್ಧಿಯಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತ ಕಲಿಯುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಎಚ್.ಸುಬ್ಬಯ್ಯ, ಚಿತ್ರದುರ್ಗ ವಲಯದ ಸಂಸ್ಕೃತ ವಿಷಯ ಪರಿವೀಕ್ಷಕ ಜಿ.ಆರ್.ಗಂಗಾಧರ್, ಸಂಸ್ಕೃತ ಸಂಯೋಜಕ ಶಂಕರೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗಜಾನನ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಿ.ರೇಣುಕಾರಾಧ್ಯ ಸ್ವಾಗತಿಸಿದರು. ದೀಪಶ್ರೀ ವಂದಿಸಿದರು. ಅನಂತಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.