
ತೀರ್ಥಹಳ್ಳಿ: ‘ಕಂದಾಯ, ಭೂ ಮಾಪನ ಇಲಾಖೆ ಮೂಲ ದಾಖಲೆ ಇಲ್ಲದೆ ಹೊಸದಾಗಿ ದಾಖಲೆ ಸೃಷ್ಟಿಸುತ್ತಿದೆ. ಅರಮನೆ ಬ್ಯಾಣದಲ್ಲಿ 100 ಎಕರೆ ಭೂ ಕಬಳಿಕೆಗೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗ ಮಾರಿಕಾಂಬೆ ದೇವಸ್ಥಾನದಿಂದ ಅರಮನೆ ಬ್ಯಾಣ ಉಳಿಸಿ ಹೋರಾಟ ಸಮಿತಿ ಹಮ್ಮಿಕೊಂಡ ಪಾದಯಾತ್ರೆ ಸಭೆಯಲ್ಲಿ ಮಾತನಾಡಿದರು.
‘ಇಂತಹ ದರಿದ್ರ ಆಡಳಿತ ನನ್ನ ರಾಜಕೀಯ ಜೀವನದಲ್ಲಿ ಕಂಡಿಲ್ಲ. ಅಧಿಕಾರಿಗಳ ವರ್ತನೆ ಬೇಸರ ತರಿಸಿದೆ. ಶ್ರೀಮಂತರ ದಬ್ಬಾಳಿಕೆಗೆ ಅಧಿಕಾರಿಗಳು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ. ಮಾಜಿ ಶಾಸಕರೊಬ್ಬರು ರಸ್ತೆ, ಸೇತುವೆ ಮಾಡಿಸಿದ್ದೇನೆ. ಜನರು ಮತ ನೀಡಲಿಲ್ಲ ಎಂದು ಭಾಷಣ ಮಾಡುತ್ತಾರೆ. ಅರಮನೆ ಬ್ಯಾಣ ಕಬಳಿಕೆ ಅವರ ಶಿಷ್ಯನದ್ದೇ ಕೆಲಸ. ಭೂ ಕಬಳಿಕೆ ವಿಚಾರವನ್ನು ಆಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.
‘ರಾಜರ ಆಳ್ವಿಕೆಯ ಕಾಲದಲ್ಲಿ ಕವಲೇದುರ್ಗದಲ್ಲಿ ಕುದುರೆ ಮೇಯಲು ಬಿಟ್ಟಿದ್ದ ಈ ಪ್ರದೇಶ ವೈ.ಟಿ. ಜೋಯ್ಸರ ಹೆಸರಿಗೆ ಹೇಗೋ ದಾಖಲಾಗಿದೆ. ಭೂ ಸುಧಾರಣೆ ಕಾಯ್ದೆ ಜಾರಿಗೊಂಡಾಗ ಹೆಚ್ಚುವರಿ ಜಮೀನು ನಿಯಮದಡಿ ದಲಿತರಿಗೆ, ಭೂ ರಹಿತರಿಗೆ ಸರ್ಕಾರ ಜಮೀನು ಹಂಚಿಕೆ ಮಾಡಿದೆ. ಇದೀಗ ನಿಯಮ ಬಾಹಿರವಾಗಿ ಶ್ರೀಮಂತನ ಕೈ ಸೇರಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.
‘ಸಿರಿಬೈಲು ಧರ್ಮೇಶ್ ಮಾಡಿರುವ ಭೂ ಕಬಳಿಕೆ ಅಧಿಕಾರಿಗಳಿಗೆ ಕಾಣುವುದಿಲ್ಲ. ಬಡವರ 1 ಗುಂಟೆ ಒತ್ತುವರಿಗೆ ಅಧಿಕಾರಿಗಳ ಕಣ್ಣು ಕೆಂಪಾಗುತ್ತದೆ. ಕೊಪ್ಪರಿಗೆ ಗುಡ್ಡದಲ್ಲಿ ನಾಲ್ಕಾರು ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿ ಗುಡ್ಡ ಅಗೆದು ಸಾವಿರಾರು ಲಾರಿ ಲೋಡ್ ಮಣ್ಣು ಲೂಟಿ ಮಾಡಲಾಗಿದ್ದರೂ, ಅಧಿಕಾರಿಗಳು ಸುಮ್ಮನಿದ್ದಾರೆ’ ಎಂದು ಆರೋಪಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ಹೋರಾಟ ಸಮಿತಿ ಮುಖಂಡ ಶ್ರೀಧರ್ ಆಚಾರ್, ಸುಬ್ಬಯ್ಯ, ಬಾಬಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.