ಶಿಕಾರಿಪುರ: ಪಟ್ಟಣದಲ್ಲಿ ಮಾರ್ಚ್ 31ರಂದು ನಡೆಯುವ ಐತಿಹಾಸಿಕ ಹುಚ್ಚರಾಯಸ್ವಾಮಿ ದೇವರ ಬ್ರಹ್ಮರಥೋತ್ಸವನ್ನು ವಿಜೃಂಭಣೆಯಿಂದ ಆಚರಿಸಲು ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ದೇವಸ್ಥಾನದ ಭಕ್ತರು ಮಾತನಾಡಿ, ‘ಬ್ರಹ್ಮ ರಥೋತ್ಸವಕ್ಕೆ ಬರುವಭಕ್ತರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು. ಹುಚ್ಚರಾಯಸ್ವಾಮಿ ಕೆರೆ ಪುಷ್ಕರಣಿ ನೀರು ಕಲುಷಿತಗೊಂಡಿದ್ದು ನೀರನ್ನು ಬದಲಾಯಿಸಿ ಸ್ವಚ್ಛಗೊಳಿಸಬೇಕು. ರಥೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕುಸ್ತಿ ಪಂದ್ಯಾವಳಿ ಆಯೋಜಿಸ
ಬೇಕು ಎಂದು ಸಲಹೆ ನೀಡಿದರು.
ಹುಚ್ಚರಾಯಸ್ವಾಮಿ ಕೆರೆಗೆ ವಿನಾಯಕನಗರ, ಆಶ್ರಯ ಬಡಾವಣೆಗಳ ಕಲುಷಿತ ಚರಂಡಿ ನೀರು ಸೇರ್ಪಡೆಯಾಗುತ್ತಿದ್ದು, ಈ ನೀರು ಕೆರೆ ಸೇರದಂತೆ ಪುರಸಭೆ ಮುಖ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬ್ರಹ್ಮರಥೋತ್ಸವ ಶನಿವಾರ ನಡೆಯುವ ಕಾರಣ
ಅಂದು ನಡೆಯುವ ವಾರದ ಸಂತೆಯನ್ನು ಎರಡು ದಿನ ಮುಂಚೆಯೆ ನಡೆಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಬಿ.ಶಿವಕುಮಾರ್ ಮಾತನಾಡಿ, ‘ಎಲ್ಲರೂ ಸೇರಿ ಬ್ರಹ್ಮ ರಥೋತ್ಸವನ್ನು ವಿಜೃಂಭಣೆಯಿಂದ ನಡೆಸೋಣ. ಹುಚ್ಚರಾಯಸ್ವಾಮಿ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಾಧಿಕಾರಿ ಡಾ.ಜಯಣ್ಣ ಅವರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯ್ತಿ ಇಒ ಆನಂದಕುಮಾರ್, ಪುರಸಭೆ ಸದಸ್ಯರಾದ ಬಿ. ಯಲ್ಲಪ್ಪ, ಚಾರಗಲ್ಲಿ ಪರಶುರಾಮ್, ಮಾಜಿ ಸದಸ್ಯ ಗುರುರಾಜ್ ಜಗತಾಪ್, ಮುಖಂಡರಾದ ರುದ್ರಮುನಿ, ಬೆಣ್ಣೆ ದೇವೇಂದ್ರಪ್ಪ, ಸಂದಿಮನಿ ಯೋಗೀಶ್, ಹುಚ್ಚಪ್ಪ, ರಾಮಣ್ಣ, ಜೇನಿ ಪ್ರಕಾಶ್, ಎ.ಆರ್. ಮೂರ್ತಿ, ಜೆ.ಎಸ್. ಮಂಜುನಾಥ್, ಜೀನಳ್ಳಿ ಪ್ರಶಾಂತ್, ವಿನಯ್, ಮಧು ಹುಲ್ಮಾರ್, ಬೆಣ್ಣೆ ಪ್ರವೀಣ್, ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.