ADVERTISEMENT

ಮಳೆನೀರು ಹರಿಯುವಂತೆ ಚರಂಡಿ ನಿರ್ಮಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 6:14 IST
Last Updated 5 ಜನವರಿ 2018, 6:14 IST

ಆನವಟ್ಟಿ: ‘ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆದಾರರು ನಿಯಮಾನುಸಾರ ಕಾಮಗಾರಿ ಮಾಡುತ್ತಿಲ್ಲ. ನಮ್ಮ ಮನೆಯ ಬಳಿ ನಿರ್ಮಿಸುತ್ತಿರುವ ಬಾಕ್ಸ್‌ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ’ ಎಂದು ಗ್ರಾಮಸ್ಥ ದೇವೇಂದ್ರಪ್ಪ ದೂರಿದ್ದಾರೆ.

‘ಶಿರಾಳಕೊಪ್ಪದಿಂದ ಹಾನಗಲ್‌ವರಗೆ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆನವಟ್ಟಿಯಲ್ಲಿ ಶಾಮನಕಟ್ಟೆಯಿಂದ ವಿಠ್ಠಲ ದೇವಸ್ಥಾನದವರೆಗೆ ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ. ರಸ್ತೆಯ ಮಧ್ಯದಲ್ಲಿ ನೀರಿನ ಪೈಪ್‌, ಕೇಬಲ್‌ಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಹಾಯಿಸಲು ದೊಡ್ಡ ಸಿಮೆಂಟ್ ಪೈಪ್‌ ಆಳವಡಿಸಲಾಗಿದೆ.

ಅದು ಬಾಕ್ಸ್‌ ಚರಂಡಿ ನಡುವೆ ಬಂದಿದ್ದು, ಕೆಲವು ಕಡೆ ನೆಲ ಮಟ್ಟಕ್ಕಿಂತಲೂ ಎಂಟರಿಂದ ಹತ್ತು ಇಂಚು ಎಚ್ಚರದಲ್ಲಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಕೆ–ಶಿಪ್ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಆನವಟ್ಟಿ ಹೃದಯ ಭಾಗದಲ್ಲಿ ಕಾಮಗಾರಿ ಪ್ರಾರಂಭವಾಗಿ ಎರಡು ತಿಂಗಳಾದರೂ ಮುಗಿದಿಲ್ಲ. ವಾಹನ ಚಾಲಕರು ರಸ್ತೆಯಲ್ಲಿ ಸಂಚರಿಸುವಾಗ ಹರಸಾಹಸ ಪಡಬೇಕಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪಿ. ಹನುಮಂತಪ್ಪ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.