ADVERTISEMENT

ವ್ಯವಹಾರಕ್ಕೆ ಇಂಗ್ಲಿಷ್, ಮಾತಾಡಲು ಕನ್ನಡ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:31 IST
Last Updated 9 ಜನವರಿ 2018, 5:31 IST

ಹೊಸನಗರ: ‘ನಮ್ಮ ಜಲ, ನೆಲ, ಸಂಸ್ಕೃತಿ, ಭಾಷೆಯನ್ನು ಪ್ರೀತಿಸುವಂತೆ ತಮ್ಮ ಮಕ್ಕಳಿಗೆ ಪ್ರೇರೇಪಿಸಬೇಕು’ಎಂದು ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಭಾವನಾ ಆರ್. ಗೌಡ ಹೇಳಿದರು.

ಪಟ್ಟಣದ ರಾಮಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ತಾಲ್ಲೂಕು ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಹಾಗೂ ಜಾನಪದ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಇಂಗ್ಲಿಷ್ ಭಾಷೆ ವ್ಯವಹಾರಕ್ಕೆ ಮಾತ್ರ ಇರಲಿ. ನಿತ್ಯ ಮನೆಯಲ್ಲಿ, ಸುತ್ತಲಿನ ಪರಿಸರದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದು ಅವರು ಮನವಿ ಮಾಡಿದರು.

ಸಮ್ಮೇಳನಾಧ್ಯಕ್ಷ ಪತಂಜಲಿ ಹಾರೆಬೈಲು ಮಾತನಾಡಿ, ‘ಮೊಬೈಲ್, ಟಿವಿ ಹಾವಳಿಯಿಂದಾಗಿ ಮಕ್ಕಳು ಹಾಳಾಗುತ್ತಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ. ಸಮೂಹ ಮಾಧ್ಯಮಗಳು ಕೆಟ್ಟದ್ದನ್ನು ವೈಭವೀಕರಿಸುವ ಬದಲು, ಒಳ್ಳೆಯದನ್ನು ದರ್ಶಿಸುವ ಧ್ಯೇಯವನ್ನು ಹೊಂದಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪೋಷಕರು, ಗುರು ಹಿರಿಯರನ್ನು ಗೌರವಿಸುವ ಪ್ರಮಾಣ ಮಕ್ಕಳಲ್ಲಿ ಇಳಿಮುಖ ಆಗುತ್ತಿದೆ. ಇದು ನಮ್ಮ ಸಮಾಜದ ಅಧೋಗತಿಗೆ ಕಾರಣ‘ ಎಂದರು.

ADVERTISEMENT

ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕಾಮತ್, ರಾಮಕೃಷ್ಣ ವಿದ್ಯಾ ಸಂಸ್ಥೆಯ ಮುಖ್ಯಸ್ಥ ದೇವರಾಜ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಉಪಾಧ್ಯಕ್ಷ ಚಂದ್ರಶೇಖರ ಶೇಟ್, ಪ್ರಮುಖರಾದ ಗಣೇಶ ಮೂರ್ತಿ, ಭಾರತಿ ರಾಮಕೃಷ್ಣ, ಸುಧಾಕರ, ವಿದ್ಯಾರ್ಥಿಗಳಾದ ರಕ್ಷಾ, ದೀಪ್ತಿ, ಅನನ್ಯ ಜಿ.ಭಟ್, ಎಂ.ಎಸ್.ಸತ್ಯ ಹಾಜರಿದ್ದರು.

ಮಕ್ಕಳ ಕವಿಗೋಷ್ಠಿ, ಭಾಷಣ, ಕಥೆ ಹೇಳುವ ಕಾರ್ಯಕ್ರಮಗಳು ನಡೆದವು. ಶರಣ್ಯ ಸ್ವಾಗತಿಸಿದರು. ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆಸುವಿನಮನೆ ರತ್ನಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.