ತೀರ್ಥಹಳ್ಳಿ: ‘ದೇಶದ ಶೈಕ್ಷಣಿಕ ಪ್ರಗತಿಯಲ್ಲಿ ಗ್ರಾಮೀಣ ಭಾಗದ ಶೇ 75 ರಷ್ಟು ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಹಳ್ಳಿಯ ಮಕ್ಕಳು ಮುಂದಿದ್ದಾರೆ. ಕೀಳರಿಮೆ ಭಾವನೆ ಬಿಟ್ಟು ಪ್ರಮಾಣಿಕವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಿ. ಐಶಾರಾಮಿ ಜೀವನ ಜ್ಞಾನದ ಹಸಿವನ್ನು ನೀಗಿಸುವುದಿಲ್ಲ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನೆ, ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತಿಕೆಯಿಂದ ಎಲ್ಲವನ್ನು ಕಲಿತುಕೊಳ್ಳುವ ಆರ್ದ್ರೀಕರಣ ಭಾವ ಕಳೆದು ಹೋಗುತ್ತದೆ. ಆದರೆ, ಬಡವರ ಮಕ್ಕಳು ಕಲಿಯುವಲ್ಲಿ ಆಸಕ್ತಿ ವಹಿಸಿ ಸಾಧನೆಯ ಹಾದಿ ಹಿಡಿಯುತ್ತಾರೆ’ ಎಂದರು.
‘ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳನ್ನು ಇಂದಿನ ಯುವ ಪೀಳಿಗೆ ಮರೆಯಬಾರದು. ಸ್ವಾತಂತ್ರ್ಯ ಹೋರಾಟಗಾರರ ಋಣ ನಮ್ಮ ಮೇಲಿದೆ. ಕಾಲೇಜಿಗೆ ಪೊಲೀಸ್ ಬರುವ ವಾತಾವರಣ ನಿರ್ಮಿಸಬೇಡಿ’ ಎಂದು ಕಿವಿ ಮಾತು ಹೇಳಿದರು.
‘ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆ ಆಗುತ್ತಿರುವ ಹಿಂದೆ ಅನೇಕ ಪೋಷಕರ ತಪ್ಪುಗಳು ಪ್ರಧಾನವಾಗಿದೆ. ಖಾಸಗಿ ಶಾಲೆಗಳ ಆಮಿಷಗಳಿಗೆ ಮರುಳಾಗಿ ಮಕ್ಕಳನ್ನು ಮೊದಲ ವರ್ಷ ಅಲ್ಲಿಗೆ ದಾಖಲಿಸುತ್ತಾರೆ. ಖಾಸಗಿಯವರು ಫೇಲಾಗುವ ಭಯದಲ್ಲಿ ದ್ವಿತೀಯ ಪಿಯುಸಿಗೆ ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಇಂತಹ ಅನೇಕ ಘಟನೆಗಳು ಈಚೆಗೆ ಹೆಚ್ಚುತ್ತಿರುವುದು ಬೇಸರದ ಸಂಗತಿ’ ಎಂದರು.
‘ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಆರಂಭಗೊಳ್ಳುವುದೇ ಪ್ರಶ್ನೆ ಮೂಲಕ. ಹಾಗಾಗಿ ಪ್ರಶ್ನೆಗಳನ್ನು ಕೇಳುವುದನ್ನು ವಿದ್ಯಾರ್ಥಿ ಜೀವನದಲ್ಲಿ ಮೊದಲು ರೂಢಿಸಿಕೊಳ್ಳಬೇಕು. ಅದಕ್ಕೆ ಸರಿ ಹೊಂದುವ ಉತ್ತರ ಹುಡುಕಾಟದಲ್ಲಿಯೇ ಜ್ಞಾನದ ವಿಕಸನ ಆರಂಭಗೊಳ್ಳುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್. ಶೈಲಾ ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಸದಸ್ಯರಾದ ಜ್ಯೋತಿ ಮೋಹನ್, ಪ್ರಾಚಾರ್ಯರಾದ ವೈ.ಎಂ. ಸುಧಾ, ಹಿರಿಯ ಉಪನ್ಯಾಸಕ ದಿವಾಕರ ಕೆ.ಜಿ., ಎಸ್.ಎಂ. ಜಗದೀಶ್, ಪ್ರೌಢಶಾಲೆಯ ಉಪಪ್ರಚಾರ್ಯ ಮಂಜಪ್ಪ ಎನ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.