
ಶಿವಮೊಗ್ಗ: ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಲೆಚುಕ್ಕಿ ಮತ್ತು ಕೊಳೆರೋಗದಿಂದಾಗಿ ಅಡಕೆ ಮರಗಳು ನಾಶವಾಗುತ್ತಿವೆ. ನಿರೀಕ್ಷೆಗೂ ಮೀರಿ ಫಸಲು ನಷ್ಟವಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾಲ್ಕೈದು ವರ್ಷಗಳ ಹಿಂದೆ ಆಗುಂಬೆ ಭಾಗದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಈಗ ಅಡಕೆ ಮೇಲೆ ಭೀಕರ ಪರಿಣಾಮ ಬೀರಿದೆ. ಬಹುತೇಕ ಹಳ್ಳಿಗಳಲ್ಲಿ ಸಾಲು ಸಾಲಾಗಿ ಅಡಕೆ ಮರಗಳು ರೋಗದ ಹಿಡಿತಕ್ಕೆ ಸಿಕ್ಕಿ ಜೀವ ಕಳೆದುಕೊಳ್ಳುತ್ತಿವೆ. ಸಿಂಪಡಿಸಿದ ಔಷಧಗಳು ರೋಗ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿವೆ. ತೋಟದ ಸ್ಥಿತಿ ಕಂಡು ಕಂಗಾಲಾಗಿರುವ ರೈತರಿಗೆ ಮುಂದೇನು ಮಾಡೋದು ಎಂಬ ಚಿಂತೆ ಕಾಡುತ್ತಿದ್ದು, ಸರಕಾರ ಈಗಿನಿಂದಲೇ ಎಚ್ಚೆತ್ತು ಕೊಳ್ಳುವ ಅವಶ್ಯಕತೆ ಇದೆ ಎಂದರು.
ಹಿಂದೆ ಯುಪಿಎ ಸರ್ಕಾರ ಅಡಿಕೆ ಕ್ಯಾನ್ಸರ್ ಕಾರಕ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿತ್ತು. ಈಗ ಅಡಿಕೆ ಮನುಷ್ಯನಿಗೆ ಹಾನಿಕಾರಕವಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿದೆ. ಅಡಿಕೆ ಹಾನಿಕಾರಕವಲ್ಲ ಎಂದು ರುಜುವಾತು ಮಾಡಲು ಅಡಿಕೆ ಸಂಶೋಧನಾ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಈಗಾಗಲೇ ಅಡಿಕೆ ಸಂಶೋಧನಾ ಕೇಂದ್ರಕ್ಕೆ ₹15 ಲಕ್ಷ ಅನುದಾನ ನೀಡಿದೆ. ಅಡಿಕೆಯನ್ನು ಅರಣ್ಯ ಉತ್ಪನ್ನಗಳ ಪಟ್ಟಿಗೆ ಸೇರಿಸಿದ್ದು, ಅದನ್ನು ಆ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಎಲೆಚುಕ್ಕಿ ರೋಗದ ಬಗ್ಗೆ ಸರ್ಕಾರ ಮೇಲ್ನೋಟಕ್ಕೆ ರೋಗದ ಅಧ್ಯಯನ, ನಿಯಂತ್ರಣ ಹೆಸರಲ್ಲಿಒಂದಿಷ್ಟು ಅನುದಾನ ಬಿಡುಗಡೆ ಮಾಡಿ ಮೌನಕ್ಕೆ ಜಾರುತ್ತಿ್ರ. ರೈತರ ಪರವಾಗಿ ಗಟ್ಟಿ ಹೋರಾಟ ಆರಂಭಿಸಿಲ್ಲ. ಅಪಾರ ಪ್ರಮಾಣದ ಫಸಲು ನಷ್ಟ, ಅಡಕೆ ತೋಟಕ್ಕೆ ಹಾನಿ ಪರಿಗಣಿಸಿ ಸಾಲದ ಬಡ್ಡಿ ಮನ್ನ, ಮರುಪಾವತಿ ಅವಧಿ ವಿಸ್ತರಿಸುವಂತೆ ರೈತರ ಬೇಡಿಕೆ ಇದೆ. ಎಲೆಚುಕ್ಕಿ, ಕೊಳೆರೋಗದ ಪರಿಣಾಮ ಈ ವರ್ಷ ಅಡಕೆ ಫಸಲು ಇಲ್ಲವಾಗಿದೆ. ರೋಗ ನಿಯಂತ್ರಣಕ್ಕೆ ವಿಶೇಷ ವಿಜ್ಞಾನಿಗಳಿಂದ ಔಷಧ ಸಂಶೋಧನೆಗೆ ಸರಕಾರ ನೆರವು ನೀಡಬೇಕು ಆಗ್ರಹಿಸಿದರು.
ಮಳೆಮಾಪನ ಯಂತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಮನಸ್ಸಿಗೆ ಬಂದಂತೆ ಮಳೆಯ ವರದಿಯನ್ನು ಕೊಡುತ್ತಿರುವುದೂ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಎಲೆಚುಕ್ಕೆ ರೋಗದ ಸಂಶೋಧನೆಗೆ ಕೇಂದ್ರ ಸರ್ಕಾರ ತಾಂತ್ರಿಕ ಸಮಿತಿ ರಚಿಸಿದೆ. ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಸದಸ್ಯರು ಈ ಬಾರಿಯ ಅಧಿವೇಶನದಲ್ಲಿ ಚರ್ಚಿಸಬೇಕು. ಅಲ್ಲದೆ ಕೇಂದ್ರ ಸರ್ಕಾರ ಅಡಿಕೆ ಸಂಶೋಧನೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ಮೂಲಕ ಒತ್ತು ನೀಡಿರುವುದು ರೈತರಲ್ಲಿ ಆಶಾಭಾವನೆ ಉಂಟುಮಾಡಿದೆ ಎಂದರು.
ನಿರ್ದೇಶಕರಾದ ಸೂರ್ಯನಾರಾಯಣ ಕೆ.ಎಂ, ಛದ್ಮಹಾಲಪ್ಪ, ಬಿ.ಕೆ. ಶಿವಕುಮಾರ್, ಸುಬ್ರಹ್ಮಣ್ಯ ಯಡಗೆರೆ, ಗೋಪಾಲಕೃಷ್ಣ ವೈದ್ಯ, ಮಹೇಶ್ ಹೆಚ್.ಎಲ್., ಶಂಭುಲಿಂಗ ಹೆಗಡೆ, ಶಿವಶಂಕರ್ ಎಚ್.ಎಸ್., ಷಡಾಕ್ಷರಿ, ಗುರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.