ಭದ್ರಾವತಿ: ಜಮೀನು ಖಾತೆ ವಿಚಾರ ಸಂಬಂಧ ಲಂಚ ಪಡೆಯುತ್ತಿದ್ದ ವೇಳೆ ಬಿಳಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಕೇಶವಮೂರ್ತಿ ಮಂಗಳವಾರ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಪಂಚಾಯಿತಿ ಕಚೇರಿಯಲ್ಲಿ ಜಮೀನು ಖಾತೆ ಮಾಡುವ ಸಂಬಂಧ ಹರೀಶ ಎಂಬುವರಿಂದ ₹70 ಸಾವಿರ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೇಶವಮೂರ್ತಿ ಅವರನ್ನು ವಶಕ್ಕೆ ಪಡೆದರು.
ಘಟನೆ ವಿವರ: ಹೊಸನಗರ ತಾಲ್ಲೂಕಿನ ಹರೀಶ ಎಂಬುವರು ಬಿಳಿಕಿ ತಾಂಡಾದಲ್ಲಿ ಜಮೀನು ಹೊಂದಿದ್ದು, ಇದರ ಬಾಬ್ತು ಖಾತೆ ಹಾಗೂ ಜಾಗದ ಬಾಬ್ತು ಎನ್ಒಸಿ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಕೇಶವಮೂರ್ತಿ ₹ 1ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ಇದಕ್ಕೆ ಒಪ್ಪಿದ್ದ ಹರೀಶ್ ಈ ಹಿಂದೆಯೇ ₹ 5 ಸಾವಿರ ಮುಂಗಡ ನೀಡಿದ್ದು, ಮಂಗಳವಾರ ₹70 ಸಾವಿರದೊಂದಿಗೆ ಕಚೇರಿಗೆ ಬಂದು ಹಣ ನೀಡಿದ ವೇಳೆ ಆತನೊಂದಿಗೆ ಹಾಜರಿದ್ದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಪಿಡಿಒ ಅವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹದಳದ ಶಿವಮೊಗ್ಗ ವಿಭಾಗದ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವಸಂತಕುಮಾರ್, ಇಮ್ರಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.