ಶಿವಮೊಗ್ಗ: ಮೆಗಾ ಲೋಕ ಅದಾಲತ್ ಮೂಲಕ ರಾಜಿ ಆಗಬಹುದಾದಂತಹ ಪ್ರಕರಣಗಳನ್ನು ವಿಲೇ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲೂ 18,333 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಮತ್ತು ಎಲ್ಲ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯುತ್ತಿದ್ದು, ರಾಜಿಯಾಗಬಲ್ಲ ಪ್ರಕರಣಗಳ ಇತ್ಯರ್ಥ ಆಗಲಿವೆ. ಇಲ್ಲಿ ಡಿಕ್ರಿ ಆದ ಪ್ರಕರಣಗಳು ಅಂತಿಮವಾಗಿದ್ದು, ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಉಭಯ ಕಕ್ಷಿದಾರರನ್ನು ಕರೆಸಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡುವುದರಿಂದ ಸಾರ್ವಜನಿಕರ ಹಾಗೂ ನ್ಯಾಯಾಲಯದ ಸಮಯ ಉಳಿತಾಯವಾಗಲಿದೆ. ವಿಶೇಷವಾಗಿ ಪೊಲೀಸ್ ಇಲಾಖೆ, ವಿಮಾ ಕಂಪನಿಗಳ ಸಹಕಾರದಿಂದ ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ಅನೇಕ ಪ್ರಕರಣ ಇತ್ಯರ್ಥವಾಗಲಿದೆ ಎಂದರು.
ಜಿಲ್ಲೆಯಲ್ಲಿ 54,417 ಪ್ರಕರಣ ಬಾಕಿ ಇದ್ದು, ಈ ಪೈಕಿ ರಾಜಿ ಆಗಬಹುದಾದ 18,333 ಪ್ರಕರಣ ಗುರುತಿಸಿ, 1,3781 ಪ್ರಕರಣಗಳ ರಾಜಿ ಪ್ರಕ್ರಿಯೆ ನಡೆಯಲಿದೆ. ತಾಲ್ಲೂಕುಗಳ ಎಲ್ಲ ನ್ಯಾಯಾಲಯಗಳಲ್ಲಿ ಮತ್ತು ನಗರದಲ್ಲಿ 14 ಬೆಂಚ್ ಸ್ಥಾಪಿಸಿ ಪ್ರಕರಣ ವಿಲೇವಾರಿ ಮಾಡಲಾಗುತ್ತಿದೆ. ಎಲ್ಲ ಬೆಂಚ್ಗಳಲ್ಲಿ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ಸಂಧಾನಕಾರರು, ಪ್ಯಾನಲ್ ವಕೀಲರು ಹಾಜರಿದ್ದು ಪ್ರಕರಣ ವಿಲೇ ಮಾಡುವರು ಎಂದು ವಿವರಿಸಿದರು.
ಎಸ್ಬಿಐ ಮತ್ತು ಬ್ಯಾಂಕ್ ಆಫ್ ಬರೋಡ ತಮ್ಮ ಪ್ರಕರಣಗಳ ಇತ್ಯರ್ಥಕ್ಕೆ ಲೋಕ ಅದಾಲತ್ ಮುಂದೆ ಬಂದಿವೆ ಎಂದು ತಿಳಿಸಿದರು.
1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕೆ.ಎಸ್.ಮಾನು, ‘ಸಂಧಾನದ ಮೂಲಕ ಸೌಹಾರ್ದಯುತ ಶೀಘ್ರ ನ್ಯಾಯ ಒದಗಿಸುವ ಉದ್ದೇಶ ಹೊಂದಿರುವ ಲೋಕ ಅದಾಲತ್ನ ಈ ಕಾರ್ಯ ಸಾಕಾರಗೊಳ್ಳಲು ಎಲ್ಲರ ಸಹಕಾರ ಅಗತ್ಯ’ ಎಂದರು.
ಹೆಚ್ಚವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್, ‘ಲೋಕ ಅದಾಲತ್ ನಡೆಸುವ ಹಿಂದೆ ಬಹಳಷ್ಟು ಜನರ ಪರಿಶ್ರಮ ಇದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಪೊಲೀಸ್ ಸೇರಿ ವಿವಿಧ ಇಲಾಖೆಗಳ, ಸಂಸ್ಥೆಗಳ ಸಹಕಾರದಿಂದ ಶೀಘ್ರ ನ್ಯಾಯ ವಿತರಣೆ ಸಾಧ್ಯವಾಗುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು’ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ, ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರು, ಸಂಧಾನಕಾರರು, ವಕೀಲರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.