ಶಿವಮೊಗ್ಗ: ಎರಡು ದಿನಗಳು ಆರ್ಭಟಿಸಿದ್ದ ಮಳೆ ಶುಕ್ರವಾರ ಬಿಡುವು ನೀಡಿದೆ. ಜಿಲ್ಲೆಯ ಎಲ್ಲೆಡೆ ಸುರಿದ ಭಾರಿ ಮಳೆಗೆ ಹೊಸನಗರ ತಾಲ್ಲೂಕಿನಲ್ಲಿ ಗುಡ್ಡ ಕುಸಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಸಂಪೆಕಟ್ಟೆಯಿಂದ ಕಟ್ಟಿನಹೊಳೆಯ ತನಕ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಸಾರ್ವಜನಿಕರು, ಪ್ರವಾಸಿಗರು ಸಂಚರಿಸಲು ಯಾವುದೇ ತೊಂದರೆ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮತ್ತಿಮನೆ ಸುಬ್ರಹ್ಮಣ್ಯ ಹೇಳಿದರು.
ಬುಧವಾರ ರಾತ್ರಿ ಸುರಿದ ಮಳೆಗೆ ಶಂಭುಲಿಂಗೇಶ್ವರ ದೇವಾಲಯ, ಇತಿಹಾಸ ಪ್ರಸಿದ್ಧ ದೇವಗಂಗೆ ಕೊಳದ ದಂಡೆ ಕುಸಿದಿದೆ. ಕೊಳದ ಸಮೀಪವೇ ಮಣ್ಣಿನ ರಾಶಿ ಬಿದ್ದಿದೆ.
ತಗ್ಗಿದ ಒಳ ಹರಿವು: ಜಲಾಶಯಗಳ ಒಳ ಹರಿವು ಮಧ್ಯಾಹ್ನದ ವೇಳೆಗೆ ತಗ್ಗಿದೆ. ಭದ್ರಾ ಜಲಾಶಯಕ್ಕೆ ಬೆಳಿಗ್ಗೆ 10 ಸಾವಿರ ಕ್ಯುಸೆಕ್, ಲಿಂಗನಮಕ್ಕಿಗೆ 20 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಸಂಜೆಯ ವೇಳೆಗೆ ಅರ್ಧದಷ್ಟು ಕಡಿಮೆಯಾಗಿದೆ.
ಅಕಾಲಿಕ ಮಳೆಯಿಂದ ಅಡಿಕೆ, ಭತ್ತ ಮತ್ತಿತರ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ನೂರಕ್ಕು ಹೆಚ್ಚು ಮನೆಗಳಿಗೆ ಧಕ್ಕೆಯಾಗಿದೆ. ಹಾನಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.