
ರಿಪ್ಪನ್ಪೇಟೆ: ಗ್ರಾಮದ ಕೃಷಿಕ ಅನಂತಮೂರ್ತಿ ಜವಳಿ ಅವರು ‘ಜಿನೋಮ್ ಸೇವಿಯರ್’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವದೆಹಲಿಯ ಸಸ್ಯ ಪ್ರಭೇದಗಳ ಮತ್ತು ರೈತರ ಹಕ್ಕು ಪ್ರಾಧಿಕಾರದ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರಶಸ್ತಿ ನೀಡಿ ಗೌರವಿಸಿದರು.
ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಅಂಕುರ್ ನರ್ಸರಿ ಮೂಲಕ ಮೂರು ದಶಕಗಳಿಂದ ಸಸ್ಯ ಸಂರಕ್ಷಣೆ, ಪೋಷಣೆ ಮತ್ತು ರೈತರಿಗೆ ಉಚಿತ ಸಲಹೆಗಳನ್ನು ಅವರು ನೀಡುತ್ತಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕೇಂದ್ರ ಕೃಷಿ ಸಚಿವಾಲಯ ಮತ್ತು ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ವಿವಿಧ ಸಸ್ಯಗಳ ಅಭಿವೃದ್ಧಿ ಹಾಗೂ ಹಳದಿ ರುದ್ರಾಕ್ಷಿ ಹಲಸಿನ ಹಣ್ಣಿನ ತಳಿ ಸಂರಕ್ಷಣೆಗಾಗಿ ಅನಂತಮೂರ್ತಿ ಅವರಿಗೆ 2022– 23ನೇ ಸಾಲಿನಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಸಾಧಕರ ಪರಿಚಯ: ಅನಂತಮೂರ್ತಿ ಜವಳಿ ಅವರು ಬಿ.ಇ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿ, ಕೆಪಿಟಿಸಿಎಲ್ನಲ್ಲಿ 17 ವರ್ಷ ಎಂಜಿನಿಯರ್ ಮತ್ತು ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದ ಅವರು ಕೃಷಿ ಮತ್ತು ತೋಟಗಾರಿಕೆ, ಸಸ್ಯ ಸಂರಕ್ಷಣೆ, ತಳಿ ಅಭಿವೃದ್ಧಿ ಕೆಲಸಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಅಂಕುರ್ ಕೃಷಿ ಕ್ಷೇತ್ರ: ಅಂಕುರ್ ಕೃಷಿ ಕ್ಷೇತ್ರ 13 ಎಕರೆ ಭೂಮಿಯಲ್ಲಿ ಸಸ್ಯ ಪ್ರಭೇದಗಳ ಅಭಿವೃದ್ಧಿ ಪ್ರಯೋಗ ಹಾಗೂ ರೈತರ ಮಾಹಿತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಅಂಕುರ್ ಸಸ್ಯ ಕ್ಷೇತ್ರದಲ್ಲಿ 50 ರೀತಿಯ ಹಲಸಿನ ತಳಿ, 50 ಮಾವಿನ ಹಣ್ಣಿನ ತಳಿ, 10ಕ್ಕೂ ಹೆಚ್ಚು ಸಂರಕ್ಷಿತ ಅಪ್ಪೆ ಮಾವಿನ ಮಿಡಿ ತಳಿ ಹಾಗೂ ದೇಶ ವಿದೇಶದ ಹಣ್ಣುಗಳ 120ಕ್ಕೂ ಅಧಿಕ ಬಗೆಯ ಗಿಡಗಳ ಮಾರಾಟ ಮತ್ತು ಪ್ರದರ್ಶನ ಈ ಕೃಷಿಕ್ಷೇತ್ರದಲ್ಲಿ ಲಭ್ಯವಿದೆ.
ಪತ್ನಿ ಅರ್ಚನಾ ಜವಳಿ, ಮಗ ಅಮೋಘ ಜವಳಿ, ಸೊಸೆ ಕೀರ್ತಿ ಭಟ್ ಸೇರಿ ಕುಟುಂಬ ಸಮೇತರಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ.
ಹಳದಿ ರುದ್ರಾಕ್ಷಿ ಹಲಸು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಹಳದಿ ರುದ್ರಾಕ್ಷಿ ಹಲಸಿನ ಹಣ್ಣು ಒಂದು ಪ್ರಾದೇಶಿಕ ತಳಿ. ನೈಸರ್ಗಿಕವಾಗಿ ಈ ತಳಿ ಅಳಿವಿನಂಚಿನಲ್ಲಿದೆ. ಜವಳಿ ಅವರು ಈ ಹಲಸು ಪ್ರಭೇದದ ಸಂರಕ್ಷಣೆ ಮಾಡಿದ್ದಾರೆ. ರಾಜ್ಯದಲ್ಲಿಯೇ ಪ್ರಸಿದ್ಧವಾದ ರಿಪ್ಪನ್ಪೇಟೆ – ಅರಸಾಳು ಭಾಗದ ಹೊಳೆ ಸಾಲು ಅಪ್ಪೆ ಮಿಡಿಯ ತಳಿಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.