ಸಾಗರ: ಸರ್ವ ಧರ್ಮ ಸಹಿಷ್ಣುತೆಯನ್ನು ಪಾಲಿಸಿದ್ದು ಕೆಳದಿ ಸಂಸ್ಥಾನವನ್ನು ಆಳಿದ ಅರಸರ ಹೆಗ್ಗಳಿಕೆಯಾಗಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಆನಂದಪುರಂನ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೆಳದಿ ರಾಜಗುರು ಹಿರೇಮಠದಲ್ಲಿ ದಸರಾ ಉತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಪಚ್ಚೆಲಿಂಗ ದರ್ಶನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಕೆಳದಿ ರಾಜಗುರು ಹಿರೇಮಠವು ಪಚ್ಚೆಲಿಂಗದಂತಹ ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ವಸ್ತು ಹಾಗೂ ಸಂಗತಿಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ. ಆದರೆ ಎಲ್ಲದಕ್ಕಿಂತ ಭಕ್ತರೇ ಮಠದ ಪ್ರಮುಖ ಆಸ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
‘ನಮ್ಮ ನೆಲದ ಆಚಾರ, ವಿಚಾರ, ಸಂಸ್ಕೃತಿಯನ್ನು ಕಾಪಾಡುವ
ಕೆಲಸವನ್ನು ಮಠಗಳು ನಿರಂತರವಾಗಿ ಮಾಡುತ್ತಿದ್ದು ಆ ಮೂಲಕ ಜನರಲ್ಲಿ ಸಂಸ್ಕಾರವನ್ನು ಬಿತ್ತುತ್ತಿವೆ. ಮಠಗಳ ಬೆಳವಣಿಗೆ ಎಂದರೆ ಅದು ಸಮಾಜದ ಬೆಳವಣಿಗೆ ಎಂಬ ಭಾವನೆ ಬೇಕಾಗಿದೆ’ ಎಂದು ಕೆಳದಿ ರಾಜಗುರು
ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ
ಹೇಳಿದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಎಸ್.ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಭಿನವ ಚೆನ್ನಬಸವ ಸ್ವಾಮೀಜಿ, ಶಿವಸಿದ್ದರಾಮೇಶ್ವರ ಸ್ವಾಮೀಜಿ, ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ರಾಜೇಂದ್ರ ಆವಿನಹಳ್ಳಿ, ಗುರು ಕಾಗೋಡು, ಲೋಕನಾಥ್ ಬಿಳಿಸಿರಿ, ದಿನೇಶ್ ತಟ್ಟೆಕೊಪ್ಪ, ದೇವರಾಜ್ ಕೆರೋಡಿ, ಗಿರೀಶ್ ಗೌಡ, ಕುಮಾರ ಗೌಡ ಕೊಪ್ಪ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.