ಆರ್.ರಂಗಪ್ಪ
ಶಿವಮೊಗ್ಗ: ಸಾರಿಗೆ ಸಂಸ್ಥೆ ಬಸ್ಗಳ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಿದ ಬೆನ್ನಲ್ಲೇ ಖಾಸಗಿ ಬಸ್ಗಳ ಮಾಲೀಕರೂ ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರಂಗಪ್ಪ, ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
‘ರಾಜ್ಯದಲ್ಲಿ ಅದರಲ್ಲೂ ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಸರಿ ಸಮವಾಗಿ ಖಾಸಗಿ ಬಸ್ಗಳೂ ಓಡಾಟ ನಡೆಸುತ್ತಿದ್ದು, ಸಾರ್ವಜನಿಕರಿಗೆ ಬಸ್ ಸೇವೆ ಒದಗಿಸುತ್ತಿವೆ. ಕೋವಿಡ್ ನಂತರ ಖಾಸಗಿ ಬಸ್ ಉದ್ಯಮ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ನಷ್ಟಕ್ಕೀಡಾದ ಹಲವು ಖಾಸಗಿ ಬಸ್ ಕಂಪೆನಿಗಳು ಬಾಗಿಲು ಮುಚ್ಚಿವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ವಾಹನದ ಬಿಡಿ ಭಾಗಗಳ ದರ ಹೆಚ್ಚಳ, ಪೆಟ್ರೋಲ್-ಡೀಸೆಲ್ ದರ ಹಾಗೂ ಬಸ್ಗಳ ನಿರ್ವಹಣೆ ವೆಚ್ಚವೂ ಏರಿಕೆಯಾಗಿದೆ. ಇದರಿಂದ ಖಾಸಗಿ ಬಸ್ ಉದ್ಯಮ ನಡೆಸುವುದು ಕಷ್ಟವಾಗಿದೆ. ಖಾಸಗಿ ಬಸ್ಗಳನ್ನು ನಂಬಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ವೇತನ ಭತ್ಯೆ ಹೆಚ್ಚಳವಾಗದೇ ಅವರಿಗೂ ತೊಂದರೆಯಾಗಿದೆ. ನಷ್ಟದಿಂದ ಬಸ್ಗಳ ಓಡಾಟ ನಿಂತು ಹೋದರೆ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ’ ಎಂದು ಅವರು ವಿವರಿಸಿದ್ದಾರೆ.
ನಷ್ಟ ಸರಿದೂಗಿಸಿ ಖಾಸಗಿ ಬಸ್ ಉದ್ಯಮ ಉಳಿಸಲು ಸಾರಿಗೆ ಸಂಸ್ಥೆಯ ಬಸ್ಗಳ ರೀತಿ ಖಾಸಗಿ ಬಸ್ಗಳ ಪ್ರಯಾಣ ದರ ಹೆಚ್ಚಳ ಮಾಡಲು ಅವಕಾಶ ಮಾಡಿಕೊಡುವಂತೆ ಆರ್.ರಂಗಪ್ಪ ಪತ್ರದಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.