ಶಿವಮೊಗ್ಗ: ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು, ಭಾರತೀಯತೆಯನ್ನು ಅರ್ಥೈಸಿಕೊಳ್ಳುವುದೇ ಆಗಿದೆ ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಹಾಗೂ ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ಈಚೆಗೆ ನಡೆದ ‘ಕನ್ನಡ ಸಂಸ್ಕೃತಿ ಮತ್ತು ಅಂಬೇಡ್ಕರ್ ಚಿಂತನೆಗಳು: ಅನುಸಂಧಾನ’ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
‘ಅಂಬೇಡ್ಕರ್ ಅವರನ್ನು ಸರಳವಾಗಿ ಓದುವುದರಿಂದ, ಭಜನೆ ಮಾಡುವುದರಿಂದ ಪ್ರಯೋಜನವಿಲ್ಲ. ಸಂಕೀರ್ಣವಾಗಿ ಓದುವ ಮೂಲಕ ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು. ಇದು ಅಂಬೇಡ್ಕರ್ ಅವರನ್ನು ಅಪವ್ಯಾಖ್ಯಾನ ಮಾಡುತ್ತಿರುವ ಕಾಲವಾಗಿದೆ. ಅಂಬೇಡ್ಕರ್ ಚಿಂತನೆಗಳನ್ನು ವಿರೋಧಿಸುತ್ತಿದ್ದವರೂ ಈಗ ಆರಾಧಿಸಲು ಶುರು ಮಾಡಿದ್ದಾರೆ. ಅಂಬೇಡ್ಕರ್ ಅನುಯಾಯಿಗಳು ಆರಾಧನೆಯ ಮಟ್ಟಕ್ಕೆ ಇಳಿಸಿದ್ದಾರೆ. ಅಂಬೇಡ್ಕರ್ ಅವರ ಬರಹಗಳಲ್ಲಿರುವ ವೈಚಾರಿಕತೆಯ ಜೀವ ತೆಗೆದು ಅವರ ವಿಚಾರಗಳನ್ನು ಮಂಡಿಸಲಾಗುತ್ತಿದೆ. ಅವರಿಗೆ ಸಂಬಂಧಿಸಿದ ಜಾಗಗಳನ್ನು ಯಾತ್ರಾಸ್ಥಳಗಳನ್ನಾಗಿ ಮಾಡಲಾಗುತ್ತಿದೆ. ಹೀಗೆ ನಿಜ ಅಂಬೇಡ್ಕರ್ ಅವರನ್ನು ಮರೆಮಾಚಲಾಗುತ್ತಿದೆ’ ಎಂದು ತಿಳಿಸಿದರು.
‘ಅಂಬೇಡ್ಕರ್ ವಾದ ಅಪಮೌಲ್ಯಗೊಂಡಿರುವ ಈ ಸಂದರ್ಭದಲ್ಲಿ ಅದನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ಮಾರ್ಕ್ಸ್ವಾದ ಹೇಗೆ ಮಾರ್ಕ್ಸ್ನನ್ನು ದಾಟಿ ವಿವಿಧ ಆಯಾಮಗಳಿಂದ ಬೆಳೆಯುತ್ತಿದೆಯೋ ಹಾಗೆ ಅಂಬೇಡ್ಕರ್ ವಾದ ಕೂಡ ವ್ಯಕ್ತಿ ನೆಲೆಯಿಂದ ದಾಟಿ ಸಮುದಾಯಿಕ ನೆಲೆಗೆ ರೂಪಾಂತರಗೊಂಡು ಬೆಳೆಯಬೇಕಿದೆ. ಅದನ್ನು ಭಿನ್ನ ರೂಪಗಳಲ್ಲಿ ಮರು ವ್ಯಾಖ್ಯಾನ ಮಾಡಬೇಕಿದೆ. ಅಂಬೇಡ್ಕರ್ ಚಿಂತನೆಗಳ ನಿಜ ಅರ್ಥವನ್ನು ಪಡೆಯುವಲ್ಲಿ ನಾವು ಸೋತಿದ್ದೇವೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಓದಲು ಗಂಭೀರವಾಗಿ ತೊಡಗಿಸಿಕೊಳ್ಳಬೇಕು’ ಎಂದು ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಸಲಹೆ ನೀಡಿದರು.
ಶಿಬಿರದ ನಿರ್ದೇಶಕ ಸಿ.ಜಿ. ಲಕ್ಷ್ಮೀಪತಿ, ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಸಬಿತಾ ಬನ್ನಾಡಿ, ಉಪಾಧ್ಯಕ್ಷ ಕುಂಸಿ ಉಮೇಶ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಕುವೆಂಪು ವಿವಿ ಹಣಕಾಸು ಅಧಿಕಾರಿ ಎಚ್.ಎನ್. ರಮೇಶ್, ಯುಗಧರ್ಮ ರಾಮಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.