ಶಿವಮೊಗ್ಗ: ಲೋಕಪಾಲ ಮಸೂದೆ ಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು ನೆಹರೂ ಕ್ರೀಡಾಂಗಣದ ಮುಂಭಾಗ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಲೋಕಪಾಲಕ್ಕೆ ಆಗ್ರಹಿಸಿ ದಶಕಗಳಿಂದ ಅವರು ಹೋರಾಟ ನಡೆಸುತ್ತಿದ್ದಾರೆ. 1967ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಸಮಿತಿ ದೇಶದಲ್ಲಿನ ಭ್ರಷ್ಟಚಾರ ನಿರ್ಮೂಲನೆಗಾಗಿ ‘ಒಂಬುಡ್ಸ್ಮನ್’ ರೂಪದ ಲೋಕಪಾಲರ ನೇಮಕಕ್ಕೆ ಶಿಫಾರಸು ಮಾಡಿತ್ತು. ನಂತರ 8 ಬಾರಿ ಬೇರೆ ಬೇರೆ ಲೋಕಪಾಲ ಮಸೂದೆಗಳು ಸಂಸತ್ತಿನಲ್ಲಿ ಮಂಡನೆಯಾಗಿವೆ. 2008ರಿಂದ ಅಡಳಿತ ಪಕ್ಷ, ವಿರೋಧ ಪಕ್ಷಗಳ ಸಹಕಾರದಿಂದ ಲೋಕಪಾಲ ಮಸೂದೆ ದುರ್ಬಲಗೊಳ್ಳುತ್ತಲೇ ಸಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ನಿಯಂತ್ರಣದಿಂದ ಸಂಪೂರ್ಣ ಮುಕ್ತವಾದ, ಸ್ವಾಯತ್ತ ಸ್ಥಾನಮಾನ ಇರುವ ಲೋಕಪಾಲ ಅಗತ್ಯವಿದೆ. ಈಗ ಮಸೂದೆ ಜಾರಿಗೆ ಅಣ್ಣಾ ಹಜಾರೆ ಅವರು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಎಲ್ಲರೂ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಮುಖಂಡರಾದ ಡಾ.ಎನ್.ಎಲ್.ನಾಯಕ್, ಡಾ.ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಅಶೋಕ್ಯಾದವ್, ಡಾ.ಶೇಖರ್ ಗೌಳೇರ್, ಜನಮೇಜಿರಾವ್, ಶಿವಣ್ಣ, ಜಿ.ಮಾದಪ್ಪ, ಎಚ್.ಆರ್.ಬಸವರಾಜಪ್ಪ, ಅ.ನಾ.ವಿಜಯೇಂದ್ರರಾವ್, ಬಾಬುರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.