ADVERTISEMENT

ಹಿಂದೂ ವಿರೋಧಿ ಬಜೆಟ್‌: ಸಂಸದ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:42 IST
Last Updated 10 ಮಾರ್ಚ್ 2025, 14:42 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ‌ ರೇಣುಕಾಂಬಾ ದೇವಿ‌ ಜಾತ್ರೆ ನಿಮಿತ್ತ ನಡೆದ ರಥೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡು ದೇವಿಗೆ ಉಡಿ ನೀಡಿದರು
ಸೊರಬ ತಾಲ್ಲೂಕಿನ ಚಂದ್ರಗುತ್ತಿ‌ ರೇಣುಕಾಂಬಾ ದೇವಿ‌ ಜಾತ್ರೆ ನಿಮಿತ್ತ ನಡೆದ ರಥೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡು ದೇವಿಗೆ ಉಡಿ ನೀಡಿದರು    

ಸೊರಬ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಸಮುದಾಯದ ಓಲೈಕೆಗಾಗಿ ಬಜೆಟ್‌ ಮಂಡಿಸಿದ್ದು, ಇತರ ಸಮುದಾಯಗಳ ಬಡವರನ್ನು ಕಡೆಗಣಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ದೂರಿದರು.‌

ತಾಲ್ಲೂಕಿನ ಚಂದ್ರಗುತ್ತಿ‌ ರೇಣುಕಾಂಬಾ ದೇವಿ‌ ಜಾತ್ರೆ ನಿಮಿತ್ತ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನರೇಂದ್ರ ಮೋದಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ಎಲ್ಲಾ ವರ್ಗದ ಜನರ ಒಳಿತನ್ನು ಗಮನದಲ್ಲಿ ಇರಿಸಿಕೊಂಡು ಬಜೆಟ್‌ ಸಿದ್ಧಪಡಿಸಿದ್ದರು. ಆದರೆ, ರಾಜ್ಯ ಸರ್ಕಾರವು ಧರ್ಮ ಆಧಾರಿತ ಬಜೆಟ್ ಮಂಡಿಸುವ ಮೂಲಕ ಹಿಂದೂ ವಿರೋಧಿಯಾಗಿದೆ ಎಂದರು.

ADVERTISEMENT

ಅಕ್ರಮ-ಸಕ್ರಮ ಯೋಜನೆ ಅಡಿ ಟಿಸಿ ಹಾಕಿಸಲು ಈ ಹಿಂದೆ ₹ 10,000 ಶುಲ್ಕು ಕಟ್ಟಬೇಕಿತ್ತು. ಆದರೆ, ಇಂದು ₹ 3 ಲಕ್ಷ ಕಟ್ಟಬೇಕಾದ ಸ್ಥಿತಿ ಇದೆ. ಆಸ್ತಿ ನೋಂದಣಿ ಶುಲ್ಕ, ಛಾಪಾ ಕಾಗದ ಸೇರಿದಂತೆ ಮೂಲ ಸೌಕರ್ಯಗಳ ಬೆಲೆ ನಾಲ್ಕು ಪಟ್ಟು ಹೆಚ್ಚಿಸಿರುವುದು ಖಂಡನೀಯ ಎಂದು ಹೇಳಿದರು.

ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಯಾವುದೇ ಹೊಸ ಅನುದಾನ ನೀಡಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾಗಿದ್ದ ಅನುದಾನವನ್ನು ಹಿಂಪಡೆಯಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಕುಗ್ಗಿಸುವ ಕೆಲಸ ಈ ಸರ್ಕಾರದಿಂದ ಆಗುತ್ತಿದೆ ಎಂದರು.

ನಿಗಮಗಳಿಂದ ಹಿಂದೆ 10-20 ಬೋರ್‌ವೆಲ್ಗಳನ್ನು ನೀಡಲಾಗುತ್ತಿತ್ತು. ಆದರೆ ಈಗ 1-2 ಬೋರ್‌ವೆಲ್ ಕೊಡಲು ಸಹ ಸರ್ಕಾರ ವಿಫಲವಾಗಿದೆ. ನಿಗಮಗಳನ್ನು, ವಿಶ್ವವಿದ್ಯಾಲಯಗಳನ್ನು ಕೇಂದ್ರೀಕೃತಗೊಳಿಸುವ ಮೂಲಕ ಮುಚ್ಚಲು ಹುನ್ನಾರ ನಡೆಸಿದೆ. ಆದಾಯ ಕಡಿಮೆ, ಖರ್ಚು ಹೆಚ್ಚಿರುವ ಆಡಳಿತದಿಂದ ರಾಜ್ಯದ ಆರ್ಥಿಕ ಸ್ಥಿತಿಗೆ ಭಾರಿ ಹಾನಿ ಉಂಟು ಮಾಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.