ADVERTISEMENT

ಸಾವಿಗೆ ಸಾವೇ ಪರಿಹಾರ ಎಂಬುದರಲ್ಲಿ ನಮಗೆ ನಂಬಿಕೆ ಇಲ್ಲ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 7:14 IST
Last Updated 30 ಜುಲೈ 2022, 7:14 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ‘ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್‌ನ ಮಹಮ್ಮದ್ ಫಾಝಿಲ್ ಕೊಲೆಗಳ ತನಿಖೆಯ ವಿಚಾರದಲ್ಲಿ ವಿರೋಧ ಪಕ್ಷಗಳು ಆರೋಪಿಸುವಂತೆ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ’ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಪ್ರವೀಣ್ ಕೊಲೆ ಪ್ರಕರಣದಲ್ಲಿ ಈಗಿರುವ ಮಾಹಿತಿ ಪ್ರಕಾರ ಆರೋಪಿಗಳಿಗೆ ಎರಡು ರಾಜ್ಯಗಳ (ಕರ್ನಾಟಕ, ಕೇರಳ) ನಂಟು ಇದೆ. ಹೀಗಾಗಿ ತನಿಖೆಯ ಹೊಣೆ ಎನ್‌ಐಎಗೆ ಒಪ್ಪಿಸಿದ್ದೇವೆ. ಫಜಲ್‌ ಕೊಲೆ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣದ ಹಿನ್ನೆಲೆ ಅರಿಯದೇ ಎನ್‌ಐಎಗೆ ಕೊಡಲು ಆಗುವುದಿಲ್ಲ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಆರಗ ಜ್ಞಾನೇಂದ್ರ,, ‘ಸಾವಿಗೆ ಸಾವು ಪರಿಹಾರ ಎಂಬುದು ನಮ್ಮ ನಂಬಿಕೆ ಅಲ್ಲ. ಯಾವುದೇ ವ್ಯಕ್ತಿ ಸತ್ತಾಗ ಮಾನಸಿಕವಾಗಿ ಹಾಗೆ ಅನ್ನಿಸುತ್ತದೆ. ಅದು ಸಹಜ. ಪ್ರಾಣ ತೆಗೆಯುವುದು ರಕ್ತ ಹರಿಸುವುದು ಹುಡುಗಾಟಿಕೆಯ ಮಾತು ಅಲ್ಲ. ಅದನ್ನು ನಾವು ನಿಲ್ಲಿಸುತ್ತೇವೆ’ ಎಂದರು.

ADVERTISEMENT

ಮತಾಂಧ ಶಕ್ತಿಗಳಿಂದ ನಡೆದ ಕೊಲೆ ಪ್ರಕರಣಗಳ ತ್ವರಿತ ವಿಚಾರಣೆಗೆ ನೆರವಾಗಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುತ್ತಿದ್ದೇವೆ. ಆದ್ಯತೆಯ ಮೇರೆಗೆ ಪ್ರಕರಣಗಳನು ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು. ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಹೇಳಿದರು.

ಮಂಗಳೂರು ಈಗ ಶಾಂತವಾಗಿದೆ. ಇನ್ನು ಯಾರೂ ಅಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನ ಪಾಪ ಅನುಭವಿಸುತ್ತಿದ್ದೇವೆ: ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮತೀಯ ಸಂಘಟನೆಗಳ ವಿರುದ್ಧದ ಎರಡು ಸಾವಿರ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಅಧಿಕಾರಕ್ಕೆ ಬಂದು ಮೊಟ್ಟ ಮೊದಲ ಕೆಲಸ ಅದನ್ನೇ ಮಾಡಿದ್ದರು. ಅವರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡು ಬೆನ್ನು ತಟ್ಟಿ ಬೆಳೆಸಿದ್ದಾರೆ. ಆ ಪಾಪವನ್ನು ಈಗ ಇಡೀ ರಾಜ್ಯ ಅನುಭವಿಸುತ್ತಿದೆ. ಈಗ ಕಾಂಗ್ರೆಸ್‌ನವರು ನಮಗೆ ನಾಲಾಯಕ್ ಅನ್ನುತ್ತಾರೆ. ಇನ್ನೇನೋ ಹೇಳುತ್ತಾರೆ. ಏನು ನೈತಿಕತೆ ಇದೆ ಅವರಿಗೆ. ಇವರ ಸರ್ಟಿಫಿಕೇಟ್ ಬೇಕಾ ನಮಗೆ ಎಂದು ಆರಗ ಕಿಡಿಕಾರಿದರು.

*
ಎಬಿವಿಪಿಯವರು ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಾಕ್ಷಣ ಅವರು ಸಿದ್ದರಾಮಯ್ಯನ ಪಕ್ಷಕ್ಕೆ ಹೋಗುತ್ತಾರೆ ಎಂದರ್ಥವಲ್ಲ. ಅವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.