ಶಿವಮೊಗ್ಗ: ಸಾಗರದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಇತಿಹಾಸ ಉಪನ್ಯಾಸಕರೊಬ್ಬರ ಮೇಲೆ ನಡೆದ ಹಲ್ಲೆ ಖಂಡಿಸಿ ಕುವೆಂಪು ವಿವಿ ಇತಿಹಾಸ ಪ್ರಾಧ್ಯಾಪಕರ ಸಂಘ, ಉನ್ನತ ಶಿಕ್ಷಣ ವೇದಿಕೆ, ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘದಿಂದ ಸೋಮವಾರ ಡಿಸಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಲಾಯಿತು.
ಉಪನ್ಯಾಸಕ ರಾಜು ಅವರ ಮೇಲೆ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಜೊತೆಯಲ್ಲಿ ಬಂದು ಕರ್ತವ್ಯದ ಅವಧಿಯಲ್ಲಿಯೇ ಹಲ್ಲೆ ನಡೆಸಿದ್ದಾನೆ. ಇದು ತೀವ್ರ ಖಂಡನೀಯ ಎಂದು ಮನವಿದಾರರು ದೂರಿದ್ದಾರೆ.
ಇದು ಕೇವಲ ಶಿಕ್ಷಕರ ಮೇಲಿನ ಹಲ್ಲೆ ಮಾತ್ರವಲ್ಲ, ಶಿಕ್ಷಣ ಇಲಾಖೆಯ ಮೇಲೆ ನಡೆದ ಹಲ್ಲೆಯಾಗಿದೆ. ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಕೂಡಲೇ ಅಧ್ಯಾಪಕರ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ ಮತ್ತು ಆತನ ತಂದೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಲು ಕಾಲೇಜಿಗೆ ಪ್ರವೇಶದ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳು ನಡತೆ ಪ್ರಮಾಣ ಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಹೊರಗಿನವರು ಯಾರಾದರೂ ಕಾಲೇಜಿಗೆ ಬರುವುದಾದರೆ ಪ್ರಾಂಶುಪಾಲರ ಅನುಮತಿ ಪಡೆಯಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಾಪಕರಾದ ಕೆ.ಎನ್.ಮಂಜುನಾಥ್, ರೂಪಾ, ಚನ್ನೇಶ್ ಹೊನ್ನಾಳಿ, ರಂಗನಾಥ್ರಾವ್ ಕರಾಡ್, ಪ್ರಸನ್ನ, ಶಂಭುಲಿಂಗಮೂರ್ತಿ, ಪ್ರೊ.ಕಾಶಿನಾಥ್, ಮಂಜುನಾಥ್, ಸಕಲೇಶ್ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.