ADVERTISEMENT

ಈಶ್ವರಪ್ಪ ವಿರುದ್ಧ ಪಕ್ಷದ ಹಿರಿಯರಿಂದ ಕ್ರಮ; ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ

ಆದರೂ ಆ ಪ್ರಮೇಯ ಬರಲಾರದು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 20:14 IST
Last Updated 28 ಮಾರ್ಚ್ 2024, 20:14 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ‘ಪಕ್ಷದ ವಿರುದ್ಧ ಬಂಡೆದ್ದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ವರಿಷ್ಠರು ಸಕಾಲದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ, ಆ ಪ್ರಮೇಯ ಬರಲಾರದು ಎಂಬ ವಿಶ್ವಾಸವಿದೆ.’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

‘ಚುನಾವಣೆಯಲ್ಲಿ ಈಶ್ವರಪ್ಪ ಅವರ ಸ್ವತಂತ್ರ ಸ್ಪರ್ಧೆ ಕುರಿತು ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ತಾಳ್ಮೆ ಬಹಳ ಮುಖ್ಯ. ಪಕ್ಷದ ಹಿರಿಯರು ಅವರ ಚಟುವಟಿಕೆ ಗಮನಿಸುತ್ತಿದ್ದಾರೆ’ ಎಂದರು.

‘ಈಶ್ವರಪ್ಪ, ಅವರ ಹಿಂದುತ್ವದ ಧೋರಣೆ ಬಗ್ಗೆ ನಮಗೆ ಗೌರವವಿದೆ. ನಾನೂ ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದವನು. ರಾಮಮಂದಿರ, ಈದ್ಗಾ ವಿಷಯ ಬಂದಾಗ, ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಯಡಿಯೂರಪ್ಪ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

ADVERTISEMENT

‘ಬೆಳಗಾವಿ, ದಾವಣಗೆರೆಯಲ್ಲಿ ಭಿನ್ನಮತ ಶಮನವಾಗಿದೆ. ಶಿವಮೊಗ್ಗದಲ್ಲಿ ಶೀಘ್ರ ಶಮನವಾಗಲಿದೆ’ ಎಂದು ಹೇಳಿದರು.

ಕೆ.ಎಸ್.ಈಶ್ವರಪ್ಪ

‘ಮೋದಿ ಹೇಳಿದರೂ ಸ್ಪರ್ಧೆ ಶತಃಸಿದ್ಧ’

‘ಬ್ರಹ್ಮ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯೇ ಬಂದು ಹೇಳಿದರೂ ಚುನಾವಣೆ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ. ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಶತಃಸಿದ್ಧ’ ಎಂದು ಕೆ.ಎಸ್.ಈಶ್ವರಪ್ಪ ಘೋಷಿಸಿದರು. ಇಲ್ಲಿನ ಗುಂಡಪ್ಪ ಶೆಡ್‌ನ ನಿವಾಸದಲ್ಲಿ ಗುರುವಾರ ಅವರು ಚುನಾವಣಾ ಕಚೇರಿ ಉದ್ಘಾಟಿಸಿದರು. ಆಗ ಬೆಂಬಲಿಗರೊಬ್ಬರು ‘ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಹೇಳಿದರೆ ಅವರು ಒಪ್ಪಿಕೊಳ್ಳುತ್ತಾರೇನೋ ಎಂಬ ಅನುಮಾನ ಈಗಲೂ ಇದೆ. ಅದು ದೈವ ನಿಶ್ಚಯ’ ಎಂದರು. ಹೀಗಾಗಿ ತಮ್ಮ ಭಾಷಣದಲ್ಲಿ ಮೇಲಿನಂತೆ ಶಪಥ ಮಾಡಿದ ಕೆ.ಎಸ್‌.ಈಶ್ವರಪ್ಪ ‘ನರೇಂದ್ರ ಮೋದಿ ಹೇಳಿದ ಕೂಡಲೇ ನಾಮಪತ್ರ ವಾಪಸ್‌ ಪಡೆಯುತ್ತೇನೆ ಎಂಬುದೆಲ್ಲ ಸುಳ್ಳು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.