ಸಾಗರ: ನಗರದ ಹೃದಯ ಭಾಗದ ಗಣಪತಿ ಕೆರೆ ಪಕ್ಕದಲ್ಲಿನ ಶಾಶ್ವತ ಧ್ವಜಸ್ತಂಭದ ಬಳಿ ಫೆಬ್ರುವರಿ 4, 5ರಂದು ಕೆರೆ ಹಬ್ಬ ಆಯೋಜಿಸಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಫೆ.4ರಂದು ಮಧ್ಯಾಹ್ನ 3ಕ್ಕೆ ಧ್ವಜಸ್ತಂಭದ ಪಕ್ಕದಲ್ಲಿ ನಿರ್ಮಿಸಿರುವ ಕೆರೆ ಹಬ್ಬದ ವೇದಿಕೆಯಲ್ಲಿ ಬಗರ್ಹುಕುಂ ರೈತರಿಗೆ ಹಕ್ಕುಪತ್ರ ವಿತರಿಸಲಾಗುವುದು. ತಾಲ್ಲೂಕಿನಲ್ಲಿ ಬಗರ್ಹುಕುಂ ಸಕ್ರಮೀಕರಣ ಕೋರಿ ಬಂದಿರುವ ಅರ್ಜಿಗಳ ಪೈಕಿ 390 ರೈತರಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆರೆ ಹಬ್ಬದ ಅಂಗವಾಗಿ ಗಣಪತಿ ಕೆರೆಯಲ್ಲಿ ಬೆಳಗಿನ ಅವಧಿಯಲ್ಲಿ ಶ್ರಮದಾನ ನಡೆಯಲಿದೆ. ವಿದ್ಯಾರ್ಥಿ
ಗಳು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ, ಸಚಿವ ಸುನೀಲ್ ಕುಮಾರ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ಹಲವು ಪ್ರಮುಖರು ಕೆರೆ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
‘ಕೆರೆ ಹಬ್ಬದ ಅಂಗವಾಗಿ ಫೆ.4 ರಂದು ಸಂಜೆ 5.30ಕ್ಕೆ ಪುರುಷರು ಹಾಗೂ ಮಹಿಳೆಯರಿಗೆ ಮ್ಯಾಟ್ ಅಂಕಣದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಚಿತ್ರನಟ ವಿಜಯ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ನಂತರ ಆಹಾರ ಮೇಳಕ್ಕೆ ಚಾಲನೆ ನೀಡಲಾಗುವುದು. ಸಂಜೆ 6ಕ್ಕೆ ಸಾಗರ ಆರತಿ, ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಸಂಜೆ 6.30ಕ್ಕೆ ಹಿನ್ನೆಲೆ ಗಾಯಕ ಹೇಮಂತ್ ತಂಡದವರಿಂದ ಗಾಯನ ಏರ್ಪಡಿಸಲಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ತಿಳಿಸಿದರು.
ಫೆ.5ರಂದು ಸಂಜೆ 5.30ಕ್ಕೆ ದಿಯಾ ಹೆಗಡೆ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡಿಕೆಡಿ ವಿಜೇತ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ದೇವೇಂದ್ರಪ್ಪ, ವಿನಾಯಕರಾವ್, ರಾಜೇಂದ್ರ ಆವಿನಹಳ್ಳಿ, ಸತೀಶ್ ಕೆ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.