ಶಿವಮೊಗ್ಗ: ‘ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಶನಿವಾರ (ಜನವರಿ 4) ರಾತ್ರಿಯಿಂದಲೇ ನೀರು ಹರಿಸಲು ಹಾಗೂ ಬಲದಂಡೆ ನಾಲೆಗೆ ಜನವರಿ 8ರಿಂದ ನೀರು ಬಿಡಲು ತೀರ್ಮಾನಿಸಲಾಗಿದೆ’ ಎಂದು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷ ಡಾ.ಅಂಶುಮಂತ್ ತಿಳಿಸಿದರು.
ಕಾಲುವೆಗಳಿಗೆ ನೀರು ಹರಿಸುವ ಸಲುವಾಗಿ ಇಲ್ಲಿನ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಶನಿವಾರ ಸಂಜೆ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಮಧು ಬಂಗಾರಪ್ಪ ಅವರೊಂದಿಗೆ ‘ಜೂಮ್’ ಮೂಲಕ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಭದ್ರಾ ಜಲಾಶಯದಲ್ಲಿ ಶನಿವಾರ 66.964 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು. ಹೀಗಾಗಿ ಎರಡೂ ನಾಲೆಗಳಿಗೆ ಮುಂದಿನ 120 ದಿನಗಳವರೆಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಭದ್ರಾ ಎಡದಂಡೆ ಕಾಲುವೆಗೆ (ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ) ನಿತ್ಯ 380 ಕ್ಯುಸೆಕ್ ಹಾಗೂ ಬಲದಂಡೆ ಕಾಲುವೆಗೆ (ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆ) ನಿತ್ಯ 2,650 ಕ್ಯುಸೆಕ್ನಂತೆ ನಾಲ್ಕು ತಿಂಗಳಲ್ಲಿ 32 ಟಿಎಂಸಿ ಅಡಿ ನೀರು ಹರಿಸಲಾಗುವುದು ಎಂದು ಹೇಳಿದರು.
‘ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಬೇಡಿಕೆ ಹಿನ್ನೆಲೆಯಲ್ಲಿ ಐಸಿಸಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಚ್ಚುಕಟ್ಟು ಭಾಗದ ಎಲ್ಲ ರೈತರೂ ತಕ್ಷಣವೇ ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಳ್ಳಬೇಕು. ನೀರು ಬಿಡುವ ತೀರ್ಮಾನ ಆಗಿದೆ. ರೈತರು ಆತಂಕ ಪಡುವುದು ಬೇಡ. ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಕಾಡಾ ಆಡಳಿತಾಧಿಕಾರಿ ಸತೀಶ್, ತಾಂತ್ರಿಕ ಅಧಿಕಾರಿ ಪ್ರಶಾಂತ್ ಹಾಜರಿದ್ದರು.
ಭದ್ರಾ ಮೇಲ್ದಂಡೆಗೆ ಸದ್ಯ ಕುಡಿಯುವ ನೀರು..
ಕುಡಿಯುವ ನೀರು ಕೊಡುವ ಉದ್ದೇಶದಿಂದ ಸದ್ಯ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗೆ ನಿತ್ಯ 700 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಅದನ್ನು ಮುಂದುವರೆಸಲಾಗುವುದು ಎಂದು ಡಾ.ಅಂಶುಮಂತ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.