ADVERTISEMENT

ಶಿವಮೊಗ್ಗ | ಭದ್ರಾ ಬಲದಂಡೆ ನಾಲೆ: ಇಂದಿನಿಂದ ನೀರು ಹರಿವು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 3:03 IST
Last Updated 22 ಜುಲೈ 2025, 3:03 IST
ಶಿವಮೊಗ್ಗದ ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಸೋಮವಾರ ನಡೆದ ಐಸಿಸಿ ಸಭೆಯ ನೋಟ
ಶಿವಮೊಗ್ಗದ ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಸೋಮವಾರ ನಡೆದ ಐಸಿಸಿ ಸಭೆಯ ನೋಟ   

ಶಿವಮೊಗ್ಗ: ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಜುಲೈ 22ರ ಮಧ್ಯಾಹ್ನದಿಂದ ನೀರು ಹರಿಸಲು ಸೋಮವಾರ ಇಲ್ಲಿನ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ತೀರ್ಮಾನಿಸಲಾಯಿತು. 

ಸಭೆಯಲ್ಲಿ ಮಾಹಿತಿ ನೀಡಿದ ಐಸಿಸಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಬಲದಂಡೆ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಭಾಗದ 1,05,570 ಹೆಕ್ಟೇರ್ ಜಮೀನಿಗೆ ಮುಂದಿನ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದರು.

186 ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಸದ್ಯ 179.8 ಅಡಿ ನೀರಿನ ಸಂಗ್ರಹ ಇದೆ ಎಂದು ಸಭೆಗೆ ಮಾಹಿತಿ ನೀಡಿದರು. 

ADVERTISEMENT

ತಕ್ಷಣ ನೀರು ಹರಿಸಿ: 

ಜಲಾಶಯವು ಭರ್ತಿ ಹಂತ ತಲುಪಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿ ಮಾಡಲು ಕಾಯುತ್ತಿದ್ದಾರೆ. ಐಸಿಸಿ ಸಭೆ ಮುಗಿದ ತಕ್ಷಣವೇ ಬಲದಂಡೆ ಕಾಲುವೆಗೆ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮಕ್ಕೆ ಸೂಚಿಸಿ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಯಕೊಂಡ ಶಾಸಕ ಕೆ.ಬಿ. ಬಸವಂತಪ್ಪ, ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಒತ್ತಾಯಿಸಿದರು.

ಸಭೆ ಮುಗಿದ ತಕ್ಷಣವೇ ಅಂದರೆ ಕಷ್ಟವಾಗುತ್ತದೆ. ನೀರಾವರಿ ನಿಗಮದ ಅಧಿಕಾರಿಗಳು ಕೆಲವು ಪ್ರಕ್ರಿಯೆ ಪೂರೈಸಬೇಕಿದೆ. ಸುರಕ್ಷತೆಯ ನಿಟ್ಟಿನಲ್ಲಿ ಕಾಲುವೆಯ ಆಸುಪಾಸಿನ ಜನರಿಗೆ ಮಾಹಿತಿ ನೀಡಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. 

‘ನಾವು ಕೊನೆಯ ಭಾಗದವರು. ಹರಪನಹಳ್ಳಿ ತಾಲ್ಲೂಕಿನ 18 ಹಳ್ಳಿಗಳಿಗೆ ನೀರು ಹರಿಯುತ್ತಿಲ್ಲ. ನಮ್ಮ ಅಚ್ಚುಕಟ್ಟು ಪ್ರದೇಶ ಜಲಾಶಯದಿಂದ 400 ಕಿ.ಮೀ. ದೂರ ಇದೆ. ಅಲ್ಲಿಗೆ ಮಳೆಗಾಲದಲ್ಲೇ ಒಂದಷ್ಟು ನೀರು ಕಾಣುತ್ತೇವೆ. ತಕ್ಷಣ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಿ’ ಎಂದು ಹರಪನಹಳ್ಳಿಯ ಶಾಸಕಿ ಲತಾ ಮಲ್ಲಿಕಾರ್ಜುನ ಹೇಳಿದರು. 

ಹೆಣ್ಣು ದೇವರ ವಾರ: 

‘ನಾವು ಹೆಣ್ಣು ದೇವರ ಪರ ಇರುವವರು. ಹಿಂದೆಲ್ಲ ಕಾಡಾದಿಂದ ಮಂಗಳವಾರ ಇಲ್ಲವೇ ಶುಕ್ರವಾರ ನಾಲೆಗೆ ನೀರು ಹರಿಸಲಾಗಿದೆ. ಹೇಗಿದ್ದರೂ ನಾಳೆ ಮಂಗಳವಾರ. ನಾಲೆಗೆ ನೀರು ಹರಿಸಲು ಪ್ರಶಸ್ತ ದಿನ’ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಸಲಹೆ ನೀಡಿದರು. ‘ನೀರು ಹರಿಸಲು ಮುಹೂರ್ತ ನೋಡಲಾಗುತ್ತದೆಯೇ?’ ಎಂದು ಸಭೆಯಲ್ಲಿದ್ದ ರೈತ ಮುಖಂಡರು ಚಟಾಕಿ ಹಾರಿಸಿದರು.

ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಮಧು ಬಂಗಾರಪ್ಪ, ಮಂಗಳವಾರ ನೀರು ಹರಿಸಲು ಸೂಚಿಸಿದರು. ಅದಕ್ಕೆ ಒಪ್ಪಿದ ಅಧಿಕಾರಿಗಳು ಜುಲೈ 22ರ ಮಧ್ಯಾಹ್ನದಿಂದ ಬಲದಂಡೆ ನಾಲೆಗೆ ನೀರು ಹರಿಯಲಿದೆ ಎಂದು ಹೇಳಿದರು.  

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಭದ್ರಾ ಕಾಡಾ ಆಡಳಿತಾಧಿಕಾರಿ ಸತೀಶ್, ರೈತ ಮುಖಂಡರಾದ ತೇಜಸ್ವಿ ಪಟೇಲ್, ರಘುನಾಥ್, ಕರ್ನಾಟಕ ನೀರಾವರಿ ನಿಗಮದ ಸೂಪರಿಟೆಂಡೆಂಟ್ ಎಂಜಿನಿಯರ್ ಆರ್.ರವಿಚಂದ್ರ, ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ರವಿಕುಮಾರ್ ಹಾಜರಿದ್ದರು. 

ಭದ್ರಾವತಿ ತಾಲ್ಲೂಕಿನ ಕಾಗೆಕೋಡಮಗ್ಗೆ ನೀರು ಬಳಕೆದಾರರ ಸಂಘಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿದ್ದು, ಸಂಘದ ಕಾರ್ಯದರ್ಶಿ ರವಿಕುಮಾರ್ ಅವರನ್ನು ಸಚಿವ ಮಧು ಬಂಗಾರಪ್ಪ ಗೌರವಿಸಿದರು.

ನಾನೂ ರೈತನ ಮಗ. ಜವಾಬ್ದಾರಿ ವಿಚಾರ ನನಗೆ ಹೇಳುವುದು ಬೇಡ. ಕೊನೆಯ ಭಾಗದವರು ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಹಿತ ಕಾಯಲು ಬದ್ಧ. ಕುಡಿಯುವ ನೀರು ಕೃಷಿ ಎರಡೂ ಆದ್ಯತೆ ಸಂಗತಿ ಆಗಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆ
ಡಾ.ಕೆ.ಪಿ.ಅಂಶುಮಂತ್ ಭದ್ರಾ ಕಾಡಾ ಅಧ್ಯಕ್ಷ
ಯಾವುದೇ ಯೋಜನೆಯಲ್ಲಿ ತಾಂತ್ರಿಕವಾಗಿ ನಿರ್ಧಾರ ಕೈಗೊಳ್ಳುವಾಗ ರೈತರ ಹಿತ ನಿರ್ಲಕ್ಷಿಸಿರುವುದಿಲ್ಲ. ಎಷ್ಟೇ ಸಮಸ್ಯೆಗಳಿದ್ದರೂ ಎಲ್ಲಾ ರೈತರು ಒಂದೇ. ಕಾಡಾ ಅಧ್ಯಕ್ಷರೊಂದಿಗೆ ನಾವೆಲ್ಲರೂ ಇದ್ದೇವೆ. ಅವರ ಬದ್ಧತೆಯನ್ನು ಪ್ರಶ್ನಿಸುವುದು ಸಲ್ಲ
ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರ ಎಲ್ಲ ಶಾಸಕರಿಗೆ ಅಭಿವೃದ್ಧಿ ಕಾರ್ಯಗಳಿಗೆ ₹ 50 ಕೋಟಿ ಅನುದಾನ ಕೊಡಲು ಮುಂದಾಗಿದೆ. ಅದರಲ್ಲಿ ತಲಾ ₹ 1 ಕೋಟಿಯನ್ನು ಭದ್ರಾ ಅಚ್ಚುಕಟ್ಟು ಪ್ರದೇಶದ ಹಿತಕ್ಕೆ ಬಳಕೆ ಮಾಡಲು ‘ಕಾಡಾ’ಗೆ ಕೊಡಿ
ತೇಜಸ್ವಿ ಪಟೇಲ್ ರೈತ ಮುಖಂಡ ದಾವಣಗೆರೆ

ಎಡದಂಡೆ ಕಾಲುವೆಗೆ ಗೇಟ್; ತುರ್ತಾಗಿ ಕೆಲಸ ಮುಗಿಸಿ

ಭದ್ರಾ ಎಡದಂಡೆ ನಾಲೆಯ ಸ್ಲುಸ್ ಗೇಟ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಅದನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ಈಗಾಗಲೇ ನಿಗದಿತ ಸಮಯ ಮೀರಿದೆ. ನೀರಿನ ಆಳದಲ್ಲಿ ಇಳಿದು ಕೆಲಸ ಮಾಡಬೇಕಿದೆ ಎಂಬ ಕಾರಣಕ್ಕೆ ಹೆಚ್ಚಿನ ಸಮಯ ಕೇಳುತ್ತಿದ್ದೀರಿ. ಆದರೆ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಗಮನಿಸಿ. ಆಗಸ್ಟ್ 5ರಿಂದ 120 ದಿನಗಳ ಕಾಲ ನೀರು ಕೊಡಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

Cut-off box - ಬಲದಂಡೆ ನಾಲೆ ಸೀಳಿದ ವಿಚಾರ; ಬಿಸಿ ಚರ್ಚೆ.. ಭದ್ರಾ ಬಲದಂಡೆ ನಾಲೆ ಸೀಳಿ ಕುಡಿಯುವ ನೀರು ಕೊಂಡೊಯ್ದಿರುವ ವಿಚಾರ ಐಸಿಸಿ ಸಭೆಯಲ್ಲಿ ಬಿಸಿ ಚರ್ಚೆಗೆ ಕಾರಣವಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಬಿ.ಪಿ.ಹರೀಶ್ ‘ಹರಿಹರ ಹೊನ್ನಾಳಿ ದಾವಣಗೆರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕುಗಳ ಕೊನೆಯ ಭಾಗದ ಶೇ 35ರಷ್ಟು ಪ್ರದೇಶಕ್ಕೆ ಬಲದಂಡೆ ನಾಲೆಯ ನೀರು ಹರಿಯುತ್ತಿಲ್ಲ. ಕಾಡಾ ಪುಸ್ತಕದಲ್ಲಿ ಮಾತ್ರ ನೀರಿನ ಮಾಹಿತಿ ಇರುತ್ತದೆ. ಮೊದಲೇ ಬಲದಂಡೆ ನಾಲೆಯ ಕೊನೆಯ ಭಾಗದ ರೈತರು ನೀರು ಹರಿಯದೇ ಸಂಕಷ್ಟದಲ್ಲಿದ್ದಾರೆ. ಯೋಜನೆಯ ಜಾರಿ ವಿಚಾರದಲ್ಲಿ ಸ್ವತಃ ಆಡಳಿತ ಪಕ್ಷದ ಶಾಸಕರನ್ನೇ ಕತ್ತಲೆಯಲ್ಲಿ ಇಡಲಾಗಿದೆ. ಕಾಡಾ ಕೂಡ ಈ ಬಗ್ಗೆ ರೈತರಲ್ಲಿನ ಗೊಂದಲ ನಿವಾರಣೆಗೆ ಮುಂದಾಗಲಿಲ್ಲ. ಕಾಡಾ ನಮ್ಮ ಪರ ಹೋರಾಡಬೇಕಿತ್ತು. ರೈತರ ಪರ ಕಾಳಜಿ ತೋರಿಸಲಿಲ್ಲ. ಕೊನೆಯ ಭಾಗದವರು ಕಾಡಾ ಅಧ್ಯಕ್ಷರಾಗಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ನಾಲೆ ಸೀಳಿರುವುದರಿಂದ ಈಗ ರೈತರು ಇನ್ನಷ್ಟು ಸಮಸ್ಯೆಗೆ ತುತ್ತಾಗಲಿದ್ದೇವೆ’ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ‘ನಮಗೆ ಕುಡಿಯಲು ನೀರು ಕೊಟ್ಟ ಕಾರಣಕ್ಕೆ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗಿಲ್ಲ. ಬದಲಿಗೆ ದಾವಣಗೆರೆ ಜಿಲ್ಲೆಯಲ್ಲಿ ಶ್ರೀಮಂತರು ಕೆಲವರು ನೂರಾರು ಎಕರೆಯಲ್ಲಿ ತೋಟ ಮಾಡಿ ನಾಲೆಗೆ ಅಕ್ರಮವಾಗಿ ಪಂಪ್‌ಸೆಟ್ ಇಟ್ಟು ನೀರು ಕೊಂಡೊಯ್ಯುತ್ತಿದ್ದಾರೆ. ಮೊದಲು ಆ ಪಂಪ್‌ಸೆಟ್‌ಗಳನ್ನು ತೆಗೆಸಬೇಕು. ನಾಲೆಯ ಕೊನೆಯ ಭಾಗ ಸೇರಿದಂತೆ ಭದ್ರಾ ಬಲದಂಡೆ ನಾಲೆಯುದ್ದಕ್ಕೂ 25 ಕಡೆ ಕುಡಿಯುವ ನೀರಿನ ಯೋಜನೆಗಳಿಗೆ ನಾಲೆ ವಿಭಜಿಸಲಾಗಿದೆ. ಅದರಿಂದ ಆಗದ ತೊಂದರೆ ಈಗ ಹೇಗೆ ಆಗುತ್ತದೆ?. ಜೊತೆಗೆ ಬಲದಂಡೆ ನಾಲೆಯ ಸೋರಿಕೆ ತಡೆದರೆ ಕೊನೆಯ ಭಾಗದವರಿಗೆ ನೀರು ಸಿಗುತ್ತದೆ. ನಮಗೆ 30 ಕ್ಯುಸೆಕ್ ಮಾತ್ರ ಅಲೊಕೇಶನ್ ಆಗಿದ್ದು ಮುಂದಿನವರಿಗೆ ಒಂದು ನೂಲಿನಷ್ಟೂ ನೀರು ಕಡಿಮೆ ಆಗಲ್ಲ. ಸುಮ್ಮನೇ ಅಪಪ್ರಚಾರ ಸಲ್ಲದು’ ಎಂದರು. ‌ಬಲದಂಡೆ ನಾಲೆಯಿಂದ ಕುಡಿಯುವ ನೀರು ಕೊಂಡೊಯ್ದಿರುವ ಸ್ಥಳಕ್ಕೆ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆ ವಿಚಾರದ ಚರ್ಚೆ ಈಗ ಮುಂದುವರಿಸುವುದು ಬೇಡ ಎಂದು ಸಭೆ ತೀರ್ಮಾನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.