ADVERTISEMENT

ನಾಪತ್ತೆಯಾಗಿದ್ದ ನಾಲ್ವರಲ್ಲಿ ಒಬ್ಬರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:24 IST
Last Updated 20 ಜನವರಿ 2026, 4:24 IST
ರವಿಕುಮಾರ್
ರವಿಕುಮಾರ್   

ಹೊಳೆಹೊನ್ನೂರು: ಭಾನುವಾರ ಮಧ್ಯಾಹ್ನ ಅರಬಿಳಚಿ ಕ್ಯಾಂಪ್ ಸಮೀಪದ ಭದ್ರಾ ಬಲದಂಡೆ ನಾಲೆಗೆ ಬಟ್ಟೆ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ ನಾಲ್ವರ ಪೈಕಿ ರವಿಕುಮಾರ್ (24) ಶವ ಪತ್ತೆಯಾಗಿದೆ.

ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಶವ ಪತ್ತೆಯಾಗಿದೆ. ಎಸ್‌ಡಿ‌ಆರ್‌ಎಫ್, ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿದರು. ಅರಬಿಳಚಿ ಕ್ಯಾಂಪ್‌ನಿಂದ ಅಗರದಹಳ್ಳಿಯವರೆಗೆ ಸುಮಾರು 8 ಕಿ.ಮೀ. ನಾಲೆಯಲ್ಲಿ ಸತತವಾಗಿ ಕಾರ್ಯಾಚರಣೆ ನಡೆಸಿದರು. ನಂತರ ವಾಪಸ್ ಬರುತ್ತಿರುವಾಗ ಶವ ಸಿಕ್ಕಿದೆ.

ನೀಲಾಬಾಯಿ, ಮಗಳು ಶ್ವೇತಾ ಹಾಗೂ ಅಳಿಯ ಪರಶುರಾಮನ ಪತ್ತೆಗಾಗಿ ರಕ್ಷಣಾ ತಂಡಗಳು ಸೋಮವಾರ ಸಂಜೆವರೆಗೂ ಶೋಧಕಾರ್ಯ ನಡೆಸಿದವು. ಕತ್ತಲಾದ ಕಾರಣ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ADVERTISEMENT

ನಾಪತ್ತೆಯಾದವರಲ್ಲಿ ಒಬ್ಬರು ಶವ ಸಿಕ್ಕಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದರು. ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿತ್ತು.

ಮಾನವೀಯತೆ ಮೆರೆದ ಜನತೆ: ಅರಬಿಳಚಿಯ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ನಾಪತ್ತೆಯಾಗಿ, ಒಬ್ಬರು ಶವವಾಗಿ ಪತ್ತೆಯಾದಾಗ ಜನಸಾಗರವೇ ಹರಿದು ಬಂದಿತ್ತು. ನಾಪತ್ತೆಯಾದ ಕುಟುಂಬದಲ್ಲಿ ಬದುಕುಳಿದಿರುವ ಈಜು ತಜ್ಞ ಈಶ್ವರ್ ಮಲ್ಪೆ ಬಂದಿದ್ದವರೆಲ್ಲರೂ ತಮ್ಮ ತಮ್ಮ ಕೈಲಾಷ್ಟು ಹಣವನ್ನ ನೀಡಿದರು. ಅಲ್ಲಿದ್ದವರೆ ಎಲ್ಲವನ್ನೂ ಒಟ್ಟುಗೂಡಿಸಿ ಧನ ಸಹಾಯ ನೀಡಲು ಮುಂದಾದರು.

ಸೋಮವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾಲೆಯ ನೀರಿನ ಸೆಳೆವು (ರಭಸ) ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ಈ ನಾಲೆಯಲ್ಲಿ ಎಲ್ಲೂ ಕೂಡ ತಡೆಜಾಲರಿ ವ್ಯವಸ್ಥೆ ಇಲ್ಲ. ಆದ ಕಾರಣ ನೀರಿನಲ್ಲಿ ವ್ಯಕ್ತಿಗಳು ಬಿದ್ದರೆ ವೇಗವಾಗಿ ನೀರಿನೊಡನೆ ಹರಿಯುತ್ತಾರೆ. ಆದ್ದರಿಂದ ಪತ್ತೆಕಾರ್ಯ ತಡವಾಗುತ್ತಿದೆ- ಎಸ್‌ಡಿ‌ಆರ್‌ಎಫ್ ನ ಇನ್ಸ್‍ ಪೆಕ್ಟರ್ ಇಮ್ರಾನ್ ಹೇಳಿದರು.

ಭದ್ರಾವತಿ ತಾಲ್ಲೂಕು ತಹಸೀಲ್ದಾರ್ ಪರಸಪ್ಪ ಕುರುಬ ಸ್ಥಳದಲ್ಲೇ ಮೂಕ್ಕಂ ಹೂಡಿದ್ದರು. ಪಟ್ಟಣದ ಠಾಣೆಯ ಪಿ.ಐ ಶಿವಪ್ರಸಾದ್, ಎಸ್. ಐ ರಮೇಶ್, ಸಿಬ್ಬಂದಿಗಳಾದ ಅಣ್ಣಪ್ಪ, ಮಹಬೂಬ್ ಸಾಬ್ ಬಿಲ್ಲಳ್ಳಿ, ಪ್ರವೀಣ್, ಅಗ್ನಿಶಾಮಕ ದಳದ ಅಧಿಕಾರಿ ಹುಲಿಯಪ್ಪ, ಬಾಬು, ಆನಂದ, ಶೇಖರ, ರಾಜನಾಯ್ಕ್, ಮಹೇಂದ್ರ ಸೇರಿದಂತೆ ಇತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.