ADVERTISEMENT

ಭದ್ರಾವತಿ: ಮೀನು ಮಾರುಕಟ್ಟೆಗೆ ಸ್ಥಳದ ಅಭಾವ

ಸಂಚಾರ ದಟ್ಟಣೆ, ದುರ್ವಾಸನೆಯಿಂದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 5:55 IST
Last Updated 20 ಫೆಬ್ರುವರಿ 2024, 5:55 IST
ಪ್ರಸ್ತುತ ಇರುವ ಮೀನು ಮಾರುಕಟ್ಟೆಯಲ್ಲಿ 9 ವ್ಯಾಪಾರಸ್ಥರಿಗೆ ಮಾತ್ರ ಸ್ಥಳವಕಾಶವಿರುವುದು
ಪ್ರಸ್ತುತ ಇರುವ ಮೀನು ಮಾರುಕಟ್ಟೆಯಲ್ಲಿ 9 ವ್ಯಾಪಾರಸ್ಥರಿಗೆ ಮಾತ್ರ ಸ್ಥಳವಕಾಶವಿರುವುದು   

ಭದ್ರಾವತಿ: ಇಲ್ಲಿನ ಬಿ.ಎಚ್. ರಸ್ತೆಯ ಚಾಮೇಗೌಡ ಏರಿಯಾದ ಗೌಳಿಗರ ಬೀದಿಯಲ್ಲಿರುವ ಮೀನು ಮಾರುಕಟ್ಟೆಯ ಪ್ರದೇಶ ಅತ್ಯಂತ ಕಿರಿದಾಗಿದ್ದು, ವ್ಯಾಪಾರಸ್ಥರಿಗೂ ಗ್ರಾಹಕರಿಗೂ ತೊಂದರೆಯಾಗುತ್ತಿದೆ.

ಈ ಮಾರುಕಟ್ಟೆಯಲ್ಲಿ 9 ಜನ ವ್ಯಾಪಾರಿಗಳಿಗೆ ಮಾತ್ರ ಸ್ಥಳಾವಕಾಶವಿದೆ. ಆದರೆ, ಮಾರಾಟಗಾರರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಬಹುತೇಕರು ಪಕ್ಕದಲ್ಲಿ ರಸ್ತೆ ಬದಿಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಪುಟ್ಟಿಯಲ್ಲಿ ಮೀನು ಹೊತ್ತುಕೊಂಡು ಮನೆ ಬಾಗಿಲಿಗೆ ಹೋದರೆ, ಕೆಲವರು ಬೈಕ್, ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಿಕೊಂಡು ಅಲೆಯುತ್ತಿದ್ದಾರೆ.

ಉಪ ಅರಣ್ಯಾಧಿಕಾರಿ ಕಚೇರಿ ಎದುರಿಗಿನ ಖಾಲಿ ಸ್ಥಳದಲ್ಲಿ ಮೀನು ಸರಬರಾಜಿನ ವಾಹನಗಳು ನಿಂತಿರುವ ಸ್ಥಳ ಸ್ವಚ್ಛತೆ ಇಲ್ಲದೆ ವಾಸನೆಯಿಂದ ಕೂಡಿರುವುದು

ಬಿ.ಎಚ್‌. ರಸ್ತೆ, ಮೀನ್ ಕಾರ ಬೀದಿ, ನ್ಯೂಟೌನ್ ರಸ್ತೆ, ಪೇಪರ್ ಟೌನ್, ಸಿದ್ದಾಪುರ, ತರೀಕೆರೆ ರಸ್ತೆ, ಹೊಸಮನೆ ರಸ್ತೆ, ಭೋವಿ ಕಾಲೊನಿ, ಜನ್ನಾಪುರ, ಅನ್ವರ್ ಕಾಲೊನಿ, ವಿದ್ಯಾಮಂದಿರ, ಸುರಗಿತೋಪು, ಬೈಪಾಸ್ ರಸ್ತೆ, ಮೂಲೆ ಕಟ್ಟೆ, ಹಿರಿಯೂರು, ಮೂಲೆ ಕಟ್ಟೆ, ಕಾರೆಹಳ್ಳಿ, ಬಾರಂದೂರು ಭಾಗದ ರಸ್ತೆಗಳ ಬದಿಯಲ್ಲಿ ವ್ಯಾಪಾರಸ್ಥರು ಮೀನು ಮಾರುತ್ತಾರೆ.

ADVERTISEMENT

ಇದರಿಂದ ನಗರದ ಸ್ವಚ್ಛತೆಗೆ ಧಕ್ಕೆ ಆಗುತ್ತಿದೆ.  ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುತ್ತಿರುವುದರಿಂದ ಮೀನು ಬೀರುವ ದುರ್ವಾಸನೆಯಿಂದ ಅನೇಕರಿಗೆ ಕಿರಿಕಿರಿಯಾಗಿದೆ. ಗ್ರಾಹಕರು ರಸ್ತೆ ನಡುವೇ ವಾಹನ ನಿಲ್ಲಿಸಿ ಮೀನು ಖರೀದಿಸಲು ಹೋಗುವುದರಿಂದ ಸಂಚಾರ ದಟ್ಟಣೆಯೂ ಆಗುತ್ತಿದೆ.

ನಗರದ ಮೀನು ಮಾರುಕಟ್ಟೆಯಲ್ಲಿ ಸ್ಥಳವಕಾಶವಿಲ್ಲದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು

ನಗರದಲ್ಲಿ ಮೀನಿನ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎಂಬುದು ಮೀನುಗಾರರು ಮತ್ತು ಮಾರಾಟಗಾರರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸ್ಪಂದಿಸಬೇಕು ಎಂಬುದು ಗ್ರಾಹಕರ ಕೋರಿಕೆಯಾಗಿದೆ.

ಮೀನು ವ್ಯಾಪಾರಿ ಸೆಲ್ವಂ
ದಿನಕ್ಕೆ 80ರಿಂದ 100 ಕೆ.ಜಿ ಮೀನು ಮಾರುತ್ತೇವೆ. ಮಾರುಕಟ್ಟೆಯಲ್ಲಿ ಸ್ಥಳದ ಅಭಾವದಿಂದಾಗಿ ಒಬ್ಬರ ನಂತರ ಒಬ್ಬರು ಕೂರುತ್ತೇವೆ. ಇದರಿಂದ ಕಾಯಂ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ.
ಕಾವೇರಮ್ಮ ಮೀನು ವ್ಯಾಪಾರಿ
ಮೀನು ವ್ಯಾಪಾರಿ ಕಾವೇರಮ್ಮ
ಚಿಕ್ಕ ಸ್ಥಳವಾದ್ದರಿಂದ ಮೀನಿನ ವಾಸನೆ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಮೀನು ಕತ್ತರಿಸುವ ಕಟ್ಟೆ ಕೆಳಭಾಗದಲ್ಲಿ ಇರುವುದರಿಂದ ವೇಗವಾಗಿ ಕತ್ತರಿಸಿ ವಿತರಿಸಲು ತೊಂದರೆ ಆಗುತ್ತಿದೆ.
ಸೆಲ್ವರಾಜ್ ಮೀನು ವ್ಯಾಪಾರಿ
ಎಂ. ಚನ್ನನವರ್
ಕಾವಲಗುಂದಿಯಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಒಂದು ಎಕರೆ ಸ್ಥಳ ಕಾಯ್ದಿರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರಕಾಶ್ ಚೆನ್ನಪ್ಪನವರ್ ನಗರಸಭೆ ಆಯುಕ್ತ
ಸಗಟು ಮಾರಾಟವೂ ಸಮಸ್ಯೆಯ ಆಗರ
ಭದ್ರಾವತಿ ನಗರಕ್ಕೆ ಹೈದರಾಬಾದ್ ವಿಜಯವಾಡ ಕಾರವಾರ ಮಂಗಳೂರು ಉಡುಪಿಯಿಂದ ನಿತ್ಯ ಸರಾಸರಿ 7 ಟನ್‌ ಮೀನು ಬರುತ್ತಿದೆ. ಅದನ್ನು ಬಿ.ಎಚ್. ರಸ್ತೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗದ ಖಾಲಿ ಜಾಗದಲ್ಲಿ ತಂದು ಸ್ಥಳೀಯ ಮಾರಾಟಗಾರರಿಗೆ ಸಗಟು ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಬೆಳಗಿನ ಜಾವ 3 ಗಂಟೆಯಿಂದಲೇ ವ್ಯಾಪಾರಿಗಳು ಕಿಕ್ಕಿರಿದು ಸೇರಿರುತ್ತಾರೆ. ಅಲ್ಲಿಯೂ ವಾಸನೆ ಮತ್ತು ಸ್ವಚ್ಛತೆಯ ಕೊರತೆ ಎದುರಾಗಿದೆ. ಈ ಸಂಬಂಧ ಹಲವಾರು ದೂರುಗಳು ನಗರಸಭೆಗೆ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.