ADVERTISEMENT

ಶಿವಮೊಗ್ಗ: ಭಾರತ್ ಜೋಡೊ ಸಮಾರೋಪ ನಾಳೆ:ಎನ್.ರಮೇಶ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:39 IST
Last Updated 29 ಜನವರಿ 2023, 5:39 IST

ಶಿವಮೊಗ್ಗ: ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಸಮಾರೋಪದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪಾದಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಹೇಳಿದರು.

‘ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಮೊದಲಾದ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಜನವರಿ 30ರ ಸಂಜೆ 5 ಗಂಟೆಗೆ ಅಶೋಕ ವೃತ್ತದಿಂದ ಗೋಪಿ ಸರ್ಕಲ್‌ವರೆಗೆ ಪಾದಯಾತ್ರೆ ನಡೆಯಲಿದೆ. ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸುಧೀರ್‌ಕುಮಾರ್ ಮೊರಳ್ಳಿ ಮಾತನಾಡಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದ ಜನರ ಮನಸ್ಸನ್ನು ಬೆಸೆಯುವ ಉದ್ದೇಶದಿಂದ ರಾಹುಲ್‌ಗಾಂಧಿ ಭಾರತ್ ಜೋಡೊ ಯಾತ್ರೆ ನಡೆಸಿದ್ದಾರೆ. ಕನ್ಯಾಕುಮಾರಿಯಿಂದ ಆರಂಭವಾಗಿ, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪಾದಯಾತ್ರೆ ನಡೆಸಿದ್ದಾರೆ. ಇದರ ಸಮಾರೋಪ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಜನವರಿ 30ರಂದು ನಡೆಯಲಿದೆ. ಹಾಗಾಗಿ ಇಲ್ಲಿಯೂ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ADVERTISEMENT

ಗೋಪಿ ವೃತ್ತದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗುವುದು. ರಾಹುಲ್ ಗಾಂಧಿ ಅವರು ಪಾದಯಾತ್ರೆಯಲ್ಲಿ ಜನರೊಂದಿಗೆ ಬೆರೆತ, ಜನರ ಸಮಸ್ಯೆ ಆಲಿಸಿದ ಕ್ಷಣಗಳನ್ನು ಪ್ರಸಾರ ಮಾಡಲಾಗುವುದು. ಉದ್ಯೋಗ ಸಮಸ್ಯೆ ನಿವಾರಣೆ, ದೇಶದ ಜನರೆಲ್ಲಾ ಒಂದೇ ಎಂಬ ಭಾವನೆ ಮೂಡಿಸಲು ಪಾದಯಾತ್ರೆ ನಡೆಸಿದ್ದಾರೆ. ಅಂತಹ ಸಂಗತಿಗಳನ್ನು ಸಾರ್ವಜನಿಕರ ಮುಂದೆ ಇಡಲಾಗುವುದು ಎಂದರು.

ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎಸ್.ಪಿ.ದಿನೇಶ್, ಕಲಗೋಡು ರತ್ನಾಕರ, ರೇಖಾ ರಂಗನಾಥ್, ಎಚ್.ಸಿ.ಯೋಗೀಶ್, ಲಗಾನ್ ಸತ್ಯನಾರಾಯಣ, ವಿಜಯ್‌ಕುಮಾರ್, ನರಸಿಂಹಮೂರ್ತಿ, ಚಂದ್ರಭೂಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.