ಶಿವಮೊಗ್ಗ: ಜಿಲ್ಲಾ ಬಿಜೆಪಿ ಮಾರ್ಚ್ 13ರಂದು ಹಳೇ ಜಿಲ್ಲಾ ಕಾರಾಗೃಹದ ಆವರಣದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಆಯೋಜಿಸಿದೆ.
ಈ ವರ್ಷದ ಆರಂಭದಿಂದಲೇ ಪಕ್ಷ ಚುನಾವಣಾ ಸಿದ್ಧತೆ ಆರಂಭಿಸಿದೆ. ಪ್ರಮುಖರ ಸಭೆ, ಸಮರ್ಪಣಾ ದಿನ, ಮನೆ ಮನೆಗೆ ಭೇಟಿ, ಬೂತ್ಮಟ್ಟದ ಕಾರ್ಯಕ್ರಮಗಳು, ಮನೆಗಳ ಮೇಲೆ ಬಿಜೆಪಿ ಧ್ವಜಾ ಹಾರಾಟ, ದೊಡ್ಡ ತೆರೆಯಲ್ಲಿ ಪ್ರಧಾನಿ ಭಾಷಣ ಪ್ರಸಾರ, ಕಮಲಜ್ಯೋತಿ, ಬೈಕ್ ರ್ಯಾಲಿ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಚುನಾವಣಾ ಸಿದ್ಧತೆ ಸಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಜಯಸಂಕಲ್ಪ ಯಾತ್ರೆ ಸಮಾವೇಶಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯಹಾಗೂ ಜಿಲ್ಲೆಯ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು, ಸಂಚಾಲಕರು ಭಾಗವಹಿಸುವರು. ಸುಮಾರು 25 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದು ವಿವರ ನೀಡಿದರು.
ಸಮಾವೇಶದ ಮೂಲಕ ಲೋಕಸಭಾ ಚುನಾವಣೆ ಪ್ರಚಾರಕ್ಕೆ ವೇಗ ನೀಡಲಾಗುವುದು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.
ಫೆ. 7ರಂದು ಹಾಸನದಲ್ಲಿ 7 ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ 75 ಮುಖಂಡರು ಅಲ್ಲಿಗೆ ತೆರಳುತ್ತಾರೆ. ಫೆ.9ರಂದು ಬೆಳಿಗ್ಗೆ 10ಕ್ಕೆ ಮಂಗಳೂರಿನಲ್ಲಿ ಪ್ರಮುಖರ ಸಭೆ ನಡೆಯಲಿದೆ. ಈ ಸಭೆಗೆ ರಾಷ್ಟ್ರೀಯ ನಾಯಕ ರಾಜನಾಥಸಿಂಗ್ ಬರುತ್ತಾರೆ. ಶಕ್ತಿ ಕೇಂದ್ರಗಳ ಎಲ್ಲ ಕಾರ್ಯಕರ್ತರು ಈ ಸಭೆಯಲ್ಲಿ ಇರುತ್ತಾರೆ. ಜಿಲ್ಲೆಯಿಂದಲೂ ಕೂಡ ಸುಮಾರು 650ಕ್ಕೂ ಹೆಚ್ಚು ಕಾರ್ಯಕರ್ತರು ತೆರಳುತ್ತಾರೆ. ಅಲ್ಲಿಯೂ ಕೂಡ ಮಧ್ಯಾಹ್ನ ಪ್ರಬುದ್ಧರ ಸಭೆ ನಡೆಯಲಿದೆ ಎಂದರು.
ಬಿ.ವೈ.ರಾಘವೇಂದ್ರ ಅವರು ಸಂಸದರಾದ ಮೇಲೆ ಜಿಲ್ಲೆಗೆ ಹಲವು ಕಾರ್ಯಕ್ರಮ ನೀಡಿದ್ದಾರೆ. ಅವರೇ ಊ ಬಾರಿಯೂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. 15ರ ಒಳಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಬಿಳಕಿ ಕೃಷ್ಣಮೂರ್ತಿ, ಎನ್.ಜೆ.ರಾಜಶೇಖರ್, ಹಿರಣ್ಣಯ್ಯ, ಮಧುಸೂದನ್, ರತ್ನಾಕರ ಶೆಣೈ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.