ADVERTISEMENT

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 370ನೇ ವಿಧಿ ಪುನರ್‌ಸ್ಥಾಪನೆ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:00 IST
Last Updated 19 ಮಾರ್ಚ್ 2023, 8:00 IST
ಶಿವಮೊಗ್ಗದಲ್ಲಿ ಶನಿವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ನೋಟ
ಶಿವಮೊಗ್ಗದಲ್ಲಿ ಶನಿವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ನೋಟ   

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 370ನೇ ವಿಧಿಯನ್ನು ಪುನರ್‌ ಸ್ಥಾಪಿಸುವ ಅಪಾಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಅಭೂತಪೂರ್ವ ಸ್ಪಂದನೆ ನೋಡಿದರೆ ಇದು ವಿಜಯ ಸಂಕಲ್ಪ ಯಾತ್ರೆ ಅನ್ನಿಸುತ್ತಿಲ್ಲ. ಬದಲಿಗೆ ಚುನಾವಣೆಗೆ ಮುನ್ನವೇ ವಿಜಯ ಯಾತ್ರೆ ಅನ್ನಿಸುತ್ತಿದೆ.

2014ರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸಿಕೊಂಡು ಬಂದಿದೆ. ಹೀಗಾಗಿ ರಾಜ್ಯದ ಜನರು ಪಕ್ಷಕ್ಕೆ ತಮ್ಮ ಬೆಂಬಲ ಮುಂದುವರೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ADVERTISEMENT

ರಾಷ್ಟ್ರದ್ರೋಹಿ ಸಂಘಟನೆಗಳಾದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಸಂಘಟನೆಯೂ ಇಲ್ಲ. ಅಭ್ಯರ್ಥಿ ಕೂಡ ಇಲ್ಲ. ಇದ್ದವರು ಹೊಡೆದಾಡ್ತಾ ಇದ್ದಾರೆ. ಆದ್ರೆ, ಬಿಜೆಪಿ 224 ಕ್ಷೇತ್ರದಲ್ಲೂ ಸಂಘಟನೆ ಮೂಲಕ ಕೆಲಸ ಮಾಡ್ತಿದೆ. ಮೋದಿ ಮಾರ್ಚ್‌ 25 ಕ್ಕೆ ದಾವಣಗೆರೆಗೆ ಬರಲಿದ್ದಾರೆ ಎಂದರು.

ರಾಜ್ಯದ ಸುಮಾರು 10 ಲಕ್ಷ ಜನರು ಸೇರಲಿದ್ದಾರೆ. ಇದು ಸಿದ್ದರಾಮೋತ್ಸವಕ್ಕೆ ಪರ್ಯಾಯ ಅಲ್ಲ. ಸಿದ್ದರಾಮಯ್ಯ ಮೋದಿಗೆ ಯಾವ ಲೆಕ್ಕ. ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕ. ಮೋದಿ ಆಂದ್ರೇ ಸೂರ್ಯ ಇದ್ದಂಗೆ. ಮೋದಿ ಅವರನ್ನು ಇತರರ ಜೊತೆ ಹೋಲಿಕೆ ಮಾಡಲು ನಾವು ಇಷ್ಟ ಪಡುವುದಿಲ್ಲ ಎಂದರು.

ಯಾತ್ರೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ (ಚೆನ್ನಿ) ಪಾಲ್ಗೊಂಡಿದ್ದರು.

ಭದ್ರಾವತಿ: ಯಾತ್ರೆಗೆ ಭರ್ಜರಿ ಸ್ವಾಗತ

ಭದ್ರಾವತಿಯ ಪ್ರಮುಖ ಬೀದಿಗಳಲ್ಲಿ ಶನಿವಾರ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಂಚರಿಸಿತು. ರಥವನ್ನು ಬಿ.ಎಚ್ ರಸ್ತೆಯ ಬಸ್ ನಿಲ್ದಾಣದ ಬಳಿ ಡೊಳ್ಳುಕುಣಿತ, ಜಾನಪದಕಲಾ ತಂಡಗಳ ಕಲಾಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು.

ಅಂಬೇಡ್ಕರ್ ವೃತ್ತ, ಹಾಲಪ್ಪವೃತ್ತ, ಮಧವಾಚಾರ್ ವೃತ್ತ, ರಂಗಪ್ಪವೃತ್ತ ಮೂಲಕ ಸಾಗಿದ ರಥಯಾತ್ರೆ ಹೊಸಮನೆ ಶಿವಾಜಿ ವೃತ್ತದ ಬಳಿ ಮುಕ್ತಾಯಗೊಂಡಿತು.

ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಬಂದ ರಥದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್‌.ಅರುಣ್, ಪಕ್ಷದ ತಾಲ್ಲೂಕು ಅಧ್ಯಕ್ಷ ಧರ್ಮಪ್ರಸಾದ್‌ ಮುಖಂಡರಾದ ಶ್ರಿನಾಥ್, ಮಂಜುನಾಥ್‌ ಕದಿರೇಶ್, ಮಂಗೋಟೆ ರುದ್ರೇಶ್, ಎಸ್.ಕುಮಾರ್, ಹೇಮಾವತಿ ವಿಶ್ವನಾಥ್, ಚನ್ನೇಶ್, ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಮುಖಂಡರು, ಅಭಿಮಾನಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.