ADVERTISEMENT

ಹೊಳೆಹೊನ್ನೂರು: ಆಮೆಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ

ಕುಮಾರ್ ಅಗಸನಹಳ್ಳಿ
Published 26 ಏಪ್ರಿಲ್ 2024, 7:17 IST
Last Updated 26 ಏಪ್ರಿಲ್ 2024, 7:17 IST
<div class="paragraphs"><p>ಹೊಳೆಹೊನ್ನೂರಿನ ಸಮೀಪದಲ್ಲಿ ಭದ್ರಾ ನದಿಗೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ.</p></div>

ಹೊಳೆಹೊನ್ನೂರಿನ ಸಮೀಪದಲ್ಲಿ ಭದ್ರಾ ನದಿಗೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ.

   

ಹೊಳೆಹೊನ್ನೂರು: ಶಿವಮೊಗ್ಗದಿಂದ ಚಿತ್ರದುರ್ಗ ರಸ್ತೆ ಎನ್.ಎಚ್. 13 ಕಾಮಗಾರಿಯು ಕಳೆದ ಮೂರು ವರ್ಷಗಳಿಂದ ಪ್ರಾರಂಭವಾಗಿದ್ದು, ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಲೋಕಸಭಾ ಚುನಾವಣೆಯ ಒಳಗೆ ಕಾಮಗಾರಿ ಪೂರ್ಣಗೊಳ್ಳುವುದೆಂದು ಆಶಾಭಾವನೆ ಹೊಂದಿದ್ದ ಸಾರ್ವಜನಿಕರಿಗೆ ನಿರಾಸೆಯಾಗಿದೆ.

ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ 8 ತಿಂಗಳಲ್ಲಿ ಮುಗಿದ್ದರೂ ಸೇತುವೆ ಕಾಮಗಾರಿ ಹಾಗೂ ಬೈಪಾಸ್ ರಸ್ತೆ ಕಾಮಗಾರಿಗಳು ಆಮೆಗತಿಯತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 530 ಕೋಟಿ ಕಾಮಗಾರಿಯನ್ನು ಸರ್ಕಾರ ಮಂಚೂರು ಮಾಡಿದ್ದು, ವೇಗವಾಗಿ ರಸ್ತೆ ಅಭಿವೃದ್ದಿಗೊಳಿಸಿದ ಸರ್ಕಾರ ಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. ಈಗಾಗಲೇ ಒಂದೆರೆಡು ಬಾರಿ ಮಳೆಯಾಗಿದ್ದು, ಮಳೆಗಾಲ ಪ್ರಾರಂಭವಾಗಿ ಭದ್ರಾ ನದಿಯಲ್ಲಿ ನೀರು ಹೆಚ್ಚು ಬಂದರೆ ಕಾಮಗಾರಿ ಸ್ಥಗಿತಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ADVERTISEMENT

ಬೈಪಾಸ್ ರಸ್ತೆ ಕಾಮಗಾರಿಯೂ ಅರ್ಧಬರ್ಧವಾಗಿದ್ದು, ರಸ್ತೆ ಅಗಲೀಕರಣ ಬಾಕಿ ಉಳಿದಿದೆ. ಈಗಾಗಲೇ ಸರ್ಕಾರ ಮನೆಗಳಿಗೆ ಸಹಾಯಧನವನ್ನು ವಿತರಿಸಲಾಗಿದ್ದರೂ ಸಹ ಕೆಲವು ಮನೆಗಳನ್ನು ತೆರವುಗೊಳಿಸಬೇಕಾಗಿದೆ. ಅಲ್ಲದೇ ಸರ್ಕಾರದ ಎಂ.ಐಎಸ್ ಎಲ್ ಬಾರ್ ಇದ್ದು, ಇದನ್ನು ತೆರವುಗೊಳಿಸುವುದಕ್ಕೆ ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗಿದೆ. ಕೆಲವು ಮನೆ ಹಾಗೂ ಜಮೀನುಗಳನ್ನು ತೆರವುಗೊಳಿಸಿ ಇನ್ನೂಳಿದನ್ನು ಹಾಗೇ ಬಿಟ್ಟಿರುವುದರಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕಿದಂತಾಗಿದೆ. ಕೇತ್ರದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜಕಾರಣಿಗಳಿಗೆ ಪ್ರಚಾರ ಹಾಗೂ ಗೆಲುವಿನ ಚಿಂತೆಯಾಗಿದ್ದರೇ, ಸಾರ್ವಜನಿಕರಿಗೆ ಪ್ರಯಾಣದ ಚಿಂತೆಯಾಗಿದೆ. ಕಾಮಗಾರಿ ವಿಳಂಬದಿಂದಾಗಿ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ಟ್ರಾಫಿಕ್ ಜಾಮ್: ಶಿವಮೊಗ್ಗದಿಂದ ಚಿತ್ರದುರ್ಗ ಹೈವೆಯಾಗಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಟ ಮಾಡುವುದರಿಂದ ಅಲ್ಲದೇ ಪಟ್ಟಣ ರಸ್ತೆಯೂ ಕಿರಿದಾಗಿರುವುದರಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಮಕ್ಕಳು, ವೃದ್ದರು ಹಾಗೂ ಸಾರ್ವಜನಿಕರು ರಸ್ತೆ ದಾಟುವಾಗ ಹರಸಾಹಸ ಪಡಬೇಕಾಗಿದೆ. ಇಲ್ಲಿ ಟ್ರಾಫಿಕ್ ನಿಯಂತ್ರಗೊಳಿಸಲು ಯಾವುದೇ ಅಧಿಕಾರಿಯನ್ನು ನೇಮಿಸದೇ ಇರುವುದರಿಂದ ವಾಹನಗಳು ಎಲ್ಲೆಂದರಲ್ಲಿ ಹೋಗುವುದಿಂದ ಟ್ರಾಫಿಕ್ ಜಾಮ್ ಆಗುತ್ತಿದೆ.

ನೃಪತುಂಗ ಸರ್ಕಲ್ ಬಸ್ ಗಳು ನಿಲ್ಲಿಸುವುದರಿಂದ ಟ್ರಾಪಿಕ್ ಜಾಮ್ ಹೆಚ್ಚಾಗುತ್ತಿದೆ. ಅಲ್ಲದೇ ವಾಹನ ಓಡಾಟದಿಂದಾಗಿ ರಸ್ತೆ ಪಕ್ಕದ ಅಂಗಡಿ, ಹೋಟೆಲ್, ಗಾಡಿ ವ್ಯಾಪಾರಿಗಳಿಗೆ ದೂಳು ಹೆಚ್ಚಾಗಿದ್ದರಿಂದ ಆಹಾರ ಪದಾರ್ಥಗಳ ಮೇಲೆ ದೂಳು ಬಿಳುವುದಿರಿಂದ ಅದನ್ನೇ ಸಾರ್ವಜನಿಕರು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಭದ್ರಾನದಿಯಲ್ಲಿ ಈಗಿರುವ ಸೇತುವೆ ತುಂಬಾ ಕಿರಿದಾಗಿದ್ದು, ಬಸ್ ಅಥವಾ ಲಾರಿ ಎದುರಿಗೆ ಬಂದರೆ ಪಾಸಾಗುವರೆಗೂ ವಾಹನಗಳು ಒಂದೆಡೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ಟ್ರಾಪಿಕ್ ಜಾಮ್ ಕೂಡ ಆಗಿದೆ. ಅಲ್ಲದೇ ಕಳೆದ ವರ್ಷ ಟ್ರ್ಯಾಕ್ಟರ್ ಆಕ್ಸೆಲ್ ಕಟ್ ಆಗಿ ಸೇತುವೆ ಮಧ್ಯೆ ನಿಂತಿದ್ದರಿಂದ ವಾಹನ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು.

ಬೈಪಾಸ್ ರಸ್ತೆ ಹಾಗೂ ಸೇತುವೆ ಕಾಮಗಾರಿ ಯಾವಾಗ ಮುಗಿದು, ಟ್ರಾಫಿಕ್ ಜಾಮ್, ದೂಳಿನಿಂದ ಯಾವಾಗ ಮುಕ್ತಿ ದೊರೆಯುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

ಸರ್ಕಾರದಿಂದ ಕಾಮಗಾರಿ ವಿಳಂಬವಾಗುತ್ತಿದ್ದು ಟ್ರಾಫಿಕ್ ಜಾಮ್ ದೂಳಿಂದ ಕೂಡಿದ ವಾತವಾರಣದಿಂದಾಗಿ ಶುದ್ದ ಗಾಳಿಯಿಲ್ಲದೇ ದೂಳು ಆಹಾರ ಪದಾರ್ಥಗಳ ಮೇಲೆ ಬೀಳುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
- ಕಗ್ಗಿ ಮಲ್ಲೇಶ್ ರಾವ್ ಎಮ್ಮೆಹಟ್ಟಿ ಗ್ರಾಮಸ್ಥ.
ಮನೆ ಹಾಗೂ ಜಮೀನುಗಳನ್ನು ತೆರವುಗೊಳಿಸಿರುವ ಸರ್ಕಾರ. ಸರ್ಕಾರ ಒಡೆತನದ ಮದ್ಯೆದಂಗಡಿಯನ್ನು ಬಿಟ್ಟಿರುವುದು ವಿಪರ್ಯಸವಾಗಿದೆ. ಮೇಲ್ನೋಟಕ್ಕೆ ಇದು ಕಾಮಗಾರಿ ವಿಳಂಬದ ದುರದ್ದೇಶ ಕಾಣುತ್ತಿದೆ
- ಉಮೇಶ್ ಆರ್. ಗ್ರಾಮ ಪಂಚಾಯಿತಿ ಸದಸ್ಯ ಹೊಳೆಹೊನ್ನೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.