ADVERTISEMENT

ಅಕ್ಷರ ಜ್ಞಾನ ಜಾತಿಗೆ ಮೀಸಲಲ್ಲ

ಜಯಂತ್ಯುತ್ಸವದಲ್ಲಿ ವೀರೇಶಾನಂದ ಸರಸ್ವತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 4:04 IST
Last Updated 11 ಅಕ್ಟೋಬರ್ 2021, 4:04 IST
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಹಾನಗಲ್ ಕುಮಾರಸ್ವಾಮಿಗಳ ಜಯಂತ್ಯುತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಹಾನಗಲ್ ಕುಮಾರಸ್ವಾಮಿಗಳ ಜಯಂತ್ಯುತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು   

ಶಿಕಾರಿಪುರ: ಅಕ್ಷರ ಜ್ಞಾನ ಹಾಗೂ ಮೆರಿಟ್ ಯಾವುದೇ ಒಂದು ಜಾತಿಗೆ ಮೀಸಲಾಗಿಲ್ಲ. ಎಲ್ಲ ಜಾತಿಯವರು ಅಕ್ಷರ ಜ್ಞಾನ ಪಡೆಯಬಹುದು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷವೀರೇಶಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಆಶ್ರಯದಲ್ಲಿ ನಡೆದ ಹಾನಗಲ್ ಕುಮಾರಸ್ವಾಮಿಗಳ 154ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ನಾವು ಗಳಿಸುವ ಹಣಕ್ಕಿಂತ ನಾವು ಪಡೆಯುವ ಶಿಕ್ಷಣ ಸಮಾಜದಲ್ಲಿ ಪ್ರಮುಖ ಸ್ಥಾನ ನೀಡುತ್ತದೆ.ನಾವು ಕಲಿತ ಅಕ್ಷರ ಜ್ಞಾನ ಮತ್ತೊಬ್ಬರಿಗೆ ಮೋಸ ಮಾಡಲು ದುರ್ಬಳಕೆಯಾಗಬಾರದು’ ಎಂದು ಸಲಹೆ ನೀಡಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಹಾನಗಲ್ ಕುಮಾರಸ್ವಾಮಿಗಳು ಸಮಾಜದಲ್ಲಿದ್ದ ಮೌಢ್ಯ ಹಾಗೂ ಅಸಮಾನತೆ ತೊಲಗಿಸಲು ಶ್ರಮಿಸಿದ್ದರು. ಅವರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಭಾರತಕ್ಕೆ ಅಗ್ರ ಸ್ಥಾನ ಇದೆ. ಹಾನಗಲ್ ಕುಮಾರಸ್ವಾಮಿಗಳು ಶಿವಯೋಗ ಮಂದಿರ ಸ್ಥಾಪಿಸುವ ಮೂಲಕ ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸಿದ್ದರು’ ಎಂದು ಶ್ಲಾಘಿಸಿದರು.

ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಬಿ.ಎಂ. ಮಂಜುನಾಥ್ ಮಾತನಾಡಿದರು. ತೊಗರ್ಸಿ ಪಂಚವಣ್ಣಿಗೆ ಮಠದ ಪೀಠಾಧ್ಯಕ್ಷ ಚನ್ನವೀರ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಎನ್.ವಿ. ಈರೇಶ್ ಅಧ್ಯಕ್ಷತೆ ವಹಿಸಿದ್ದರು.

ಅತ್ಯುತ್ತಮ ಶಾಸಕ ಪ್ರಶಸ್ತಿ ಪುರಸ್ಕೃತರಾದ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕ ಸದಸ್ಯ ಬಿ.ಡಿ. ಭೂಕಾಂತ್, ಕೊಟ್ರೇಶಪ್ಪ, ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.