
ಸಾಗರ: ತಾಲ್ಲೂಕಿನ ಹೆಗ್ಗೋಡಿನ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ ಕೇಂದ್ರ ಸರ್ಕಾರದ ಜವಳಿ ಇಲಾಖೆ ನೀಡುವ ‘ಅತ್ಯುತ್ತಮ ರಾಷ್ಟ್ರೀಯ ಬ್ರ್ಯಾಂಡ್ ನಿರ್ಮಾಣ’ ಪುರಸ್ಕಾರ ಲಭ್ಯವಾಗಿದೆ.
ನವದೆಹಲಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜವಳಿ ಖಾತೆ ಸಚಿವ ಗಿರಿರಾಜ್ ಸಿಂಗ್ ಅವರು ಚರಕ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟೆರೆನ್ಸ್ ಪೀಟರ್ ಅವರಿಗೆ ಈ ಪುರಸ್ಕಾರ ಪ್ರದಾನ ಮಾಡಿದ್ದಾರೆ.
ಕೈಮಗ್ಗ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಬ್ರ್ಯಾಂಡ್ ನಿರ್ಮಾಣ, ಮಾರುಕಟ್ಟೆ ವಿಸ್ತರಣೆ, ನೇಕಾರರ ಸಬಲೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಚರಕ ಸಂಸ್ಥೆಯು ಮಹಿಳಾ ನೇಕಾರರನ್ನು ಸಂಘಟಿಸಿ ಕೈಮಗ್ಗದ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಗುರುತು ತಂದುಕೊಟ್ಟಿರುವುದು, ನೈಸರ್ಗಿಕ ಬಣ್ಣ ಬಳಕೆ, ಸುಸ್ಥಿರ ಉತ್ಪಾದನೆ, ಮಾರುಕಟ್ಟೆ ವಿಸ್ತರಣೆಯಲ್ಲಿ ಮಾಡಿದ ಸಾಧನೆಗಳ ಹಿನ್ನೆಲೆಯಲ್ಲಿ ಈ ಗೌರವ ದೊರೆತಿದೆ.
‘ಕೇಂದ್ರ ಸರ್ಕಾರ ಚರಕ ಸಂಸ್ಥೆಯನ್ನು ಗುರುತಿಸಿ ಗೌರವ ಪುರಸ್ಕಾರ ನೀಡಿರುವುದು ಮಲೆನಾಡಿನ ಗ್ರಾಮೀಣ ಮಹಿಳಾ ಉದ್ಯಮಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ’ ಎಂದು ಚರಕ ಸಂಸ್ಥೆಯ ಟೆರೆನ್ಸ್ ಪೀಟರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.