ಕಾರ್ಗಲ್:ಶರಾವತಿ ಕಣಿವೆಯ ಶಕ್ತಿ ದೇವತೆಯಾಗಿ ಕಾರ್ಗಲ್ ಪಟ್ಟಣದ ಶರಾವತಿ ನದಿ ತೀರದಲ್ಲಿ ನೆಲೆ ನಿಂತಿರುವ ಚೌಡೇಶ್ವರಿ ದೇವಿಯ 23ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಸರಳವಾಗಿ ನಡೆಯಿತು.
ಭಕ್ತರು ಮಹಾದ್ವಾರದಿಂದ ಸಾಂಪ್ರದಾಯಿಕವಾಗಿ ಹೊರೆ ಕಾಣಿಕೆಯನ್ನು ಸನ್ನಿಧಿಗೆ ಸಮರ್ಪಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಶರಾವತಿ ಕೊಳ್ಳದ ದೇವಿಯ ಭಕ್ತರು, ರೈತರು, ಉದ್ಯೋಗಸ್ಥರು, ‘ತಮ್ಮ ಕಾಯಕಗಳು ನಿರ್ವಿಘ್ನವಾಗಿ ನಡೆಯುವಂತೆ ಹರಿಸು’ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.
ಅಕ್ಕಿ, ಬೇಳೆ, ಕಾಳು, ತರಕಾರಿ, ಹಣ್ಣುಕಾಯಿ ದೇವಿಗೆ ಸಮರ್ಪಿಸಿ ಕೃತಾರ್ಥ ಭಾವನೆ ಕಂಡುಕೊಳ್ಳುತ್ತಾರೆ. ಹೊರೆ ಕಾಣಿಕೆಯೊಂದಿಗೆ ಆರಂಭವಾದ ಜಾತ್ರೋತ್ಸವ ಶುಕ್ರವಾರ ತೆರೆ ಕಂಡಿತು. ಲೋಕ ಕಲ್ಯಾಣಾರ್ಥವಾಗಿ ಶತಚಂಡಿ ಮಹಾಯಾಗವನ್ನು ಚೌಡೇಶ್ವರಿ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿತ್ತು.
ನಾಲ್ಕು ದಿನಗಳ ಕಾಲ ನಡೆದ ಜಾತ್ರೋತ್ಸವದಲ್ಲಿ ಕೋವಿಡ್ ಶಿಷ್ಟಾಚಾರ ಪಾಲಿಸಲಾಯಿತು.
ಮಹಾ ಮಂಗಳಾರತಿಯೊಂದಿಗೆ ದರುಶನದ ಪಾತ್ರಿಗಳು ಪ್ರಸಾದ ವಿತರಿಸಿ ಆಶೀರ್ವಚನ ನೀಡಿದರು. ಧರ್ಮದರ್ಶಿ ವಿನೋದ ಮಹಾಲೆ, ಸಹೋದರರಾದ ಅಜಿತ್ ಮಹಾಲೆ, ಪ್ರವೀಣ ಮಹಾಲೆ, ಪ್ರಮುಖರಾದ ಮೋಹನ್ ಎಂ. ಪೈ, ನರಸಿಂಹ ನಾಯಕ್ ಹುಬ್ಬಳ್ಳಿ, ವ್ಯವಸ್ಥಾಪಕ ಶಿವಾನಂದ ಪ್ರಭು, ಸಾಗರ ಜಿಎಸ್ಬಿ ಸಮಾಜದ ಪ್ರಮುಖ ದಾಮಣ್ಣ, ಯುವ ಮುಖಂಡರಾದ ಶ್ರೀರಾಮ ಪ್ರಭು, ಪ್ರಹ್ಲಾದ ಎಂ. ಪೈ ವಿವಿಧ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.