ಶಿವಮೊಗ್ಗ: ಸಾಗರ ತಾಲ್ಲೂಕು ಸಿಗಂದೂರು ದೇವಸ್ಥಾನ ಸರ್ಕಾರದ ವಶಕ್ಕೆ ಪಡೆಯುವ ಇಚ್ಚೆ ಇಲ್ಲ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮೇಲ್ವಿಚಾರಣಾ ಸಮತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಶಿವಮೊಗ್ಗ ಪ್ರೆಸ್ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಭವನದ ಹೆಚ್ಚುವರಿ ಕಟ್ಟಡಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವಸ್ಥಾನಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರುತ್ತಿದೆ. ಭಕ್ತರು ದೇವಸ್ಥಾನಕ್ಕೆ ನೀಡುವ ಹಣ, ಚಿನ್ನ, ಆಭರಣಗಳನ್ನು ಲೆಕ್ಕ ಪತ್ರ ವ್ಯಾಪ್ತಿಗೆ ತರಬೇಕಿದೆ. ಹಣಕಾಸು ದುರುಪಯೋಗವಾಗದಂತೆ ತಡೆಯುವ ಜತೆಗೆ, ಸಮಿತಿಯು ಅಲ್ಲಿನ ವಾಸ್ತವಿಕ ಸ್ಥಿತಿಗತಿಗಳನ್ನು ಅವಲೋಕಿಸಲಿದೆ. ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.
‘ಮಾಧ್ಯಮಗಳ ಮುಕ್ತ ಕಾರ್ಯನಿರ್ವಹಣೆಗೆ ಬದ್ಧ’
ಶಿವಮೊಗ್ಗ:ಮಾಧ್ಯಮಗಳ ಮುಕ್ತ ಕಾರ್ಯನಿರ್ವಹಣೆಗೆ ಸರ್ಕಾರ ಸದಾ ಬದ್ಧ. ಮಾಧ್ಯಮ, ಸರ್ಕಾರಗಳ ಮಧ್ಯೆ ಸಹಕಾರ ಇದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೊರೊನಾ ಸಂಕಷ್ಟದ ಮಧ್ಯೆ ಮಳೆ, ಪ್ರವಾಹದಿಂದ ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲಿ ಸಂಕಷ್ಟಗಳಿಗೆ ಬೆನ್ನು ಮಾಡುವುದಿಲ್ಲ. ಆದರೆ, ಜನರಿಗೆ ನೋವು ನೀಡುವ ಇಂತಹ ಪರೀಕ್ಷೆ ಬೇಡ ಎಂದು ದೇವರಲ್ಲಿ ಪ್ರಾರ್ಥಿಸುವೆ. ರೈತರಿಗೆ ಕಷ್ಟ ಕೊಡಬೇಡ ಎಂದು ಬೇಡಿಕೊಳ್ಳುವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.