ಶಿವಮೊಗ್ಗ: ಎಲೆಚುಕ್ಕಿ ರೋಗ ಬಾಧೆಗೆ ತುತ್ತಾಗಿರುವ ತೀರ್ಥಹಳ್ಳಿ ತಾಲ್ಲೂಕಿನ ಮುಳಬಾಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಸಮೀಪದ ಉಂಟೂರಿನ ಯು.ಎ.ಹರೀಶ್ ಅವರ ಅಡಿಕೆ ತೋಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಮಧ್ಯಾಹ್ನ ಭೇಟಿ ನೀಡಿದರು.
ಮುಖ್ಯಮಂತ್ರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಎಲೆಚುಕ್ಕಿ ರೋಗದ ಗಂಭೀರತೆ ಬಗ್ಗೆ ವಿವರಿಸಿದರು.
ತೋಟಕ್ಕೆ ಬಂದ ಗಣ್ಯರಿಗೆ ರೋಗದ ಗಂಭೀರತೆ ಮನವರಿಕೆ ಮಾಡಲು ರೈತ ಹರೀಶ್ ಅವರ ಮನೆಯ ಪಕ್ಕದಲ್ಲಿ ಆರೋಗ್ಯಕರ ಅಡಿಕೆ ಗಿಡದ ಎಲೆಗಳು, ಹಿಂಗಾರ, ಗೊನೆ, ಅಡಿಕೆ ಕಾಯಿ ಹಾಗೂ ಎಲೆಚುಕ್ಕಿ ಬಾಧಿತ ಅಡಿಕೆ ಗಿಡದ ಎಲೆ, ಒಣಗಿದ ಹಿಂಗಾರ, ಗೊನೆ, ಈಗ ಬಳಕೆ ಮಾಡುತ್ತಿರುವ ಔಷಧವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೆಳದಿ ಶಿವಪ್ಪ ನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ನಾಗೇಂದ್ರ ಪ್ರಸಾದ್ ಗ್ರಾಮಕ್ಕೆ ಬಂದಿದ್ದರು. ರೈತರೊಂದಿಗೆ ಚರ್ಚೆ ನಡೆಸಿದರು.
‘ಪೂರಾ ಹಿಂಗಾರವೇ ಸುಟ್ಟು ಹೋಗಿದೆ. ಇರುವ ಎರಡೂವರೆ ಎಕರೆ ತೋಟದಲ್ಲಿ ಈ ಹಿಂದೆ 15 ಕ್ವಿಂಟಲ್ ಅಡಿಕೆ ಬೆಳೆಯುತ್ತಿದ್ದೆವು. ಈಗ ಎಲೆಚುಕ್ಕಿ ರೋಗ ಬಾಧೆಯಿಂದ ಆರು ಕ್ವಿಂಟಲ್ ಅಡಿಕೆ ಸಿಕ್ಕಿದೆ. ಅಡಿಕೆಯ ತೂಕ ಕೂಡ ಕಡಿಮೆ ಆಗಿದೆ. ಹೀಗಾದರೆ ತೋಟ ನಂಬಿಕೊಂಡು ಬದುಕುವುದು ಹೇಗೆ? ಎಂದು ರೈತ ಹರೀಶ್ ಅವರ ಪತ್ನಿ ಸುಪ್ರಿತಾ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.