ADVERTISEMENT

ಸಿ.ಎಂ.ಖಾದರ್ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 5:49 IST
Last Updated 6 ಏಪ್ರಿಲ್ 2022, 5:49 IST

ಭದ್ರಾವತಿ: ಹಿಂದೂ ಸಮಾಜದ ಮುಖಂಡರಿಗೆ ಬೆದರಿಕೆ ಒಡ್ಡಿರುವ ಆರೋಪದ ಮೇರೆಗೆ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರ ಸಹೋದರ ಸಿ.ಎಂ. ಖಾದರ್ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿಂದೂ ಸಮಾಜದ ಮುಖಂಡರಿಗೆ ಬೆದರಿಕೆ ಒಡ್ಡಿರುವುದರ ಜೊತೆಗೆ ಸಮಾಜಕ್ಕೆ ನೋವುಂಟು ಮಾಡುವ, ಆ ಮೂಲಕ ಅವರ ಭಾವನೆಗೆ ಧಕ್ಕೆ ತಂದಿರುವ ಆರೋಪದಡಿ ಬಜರಂಗದಳ ಮುಖಂಡ ಹೊಸಮನೆ ವಡಿವೇಲು ಅವರು ಖಾದರ್ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನ ಅಂಶ: ‘ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ಸಂಬಂಧ ಖಾಸಗಿ ನ್ಯೂಸ್ ಚಾನಲ್ ಒಂದರಲ್ಲಿ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದಾಗ ಅದರಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯ ಫೋಟೊ ಹಾಕಿ, ಕೆಳಗೆ ‘ಹಲಾಲ್ ಮಾಡುವುದೇ... ಇದಕ್ಕಾಗಿ’ ಎಂದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಹಿಂದೂ ಯುವಕರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಸಿ ಸಾಮಾಜಿಕ ಆಶಾಂತಿ ಉಂಟುಮಾಡುವ ಪ್ರಯತ್ನವನ್ನು ಸಿ.ಎಂ. ಖಾದರ್ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ADVERTISEMENT

ದೂರಿನ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಿರುವ ಸಂದೇಶದ ಪ್ರತಿಯನ್ನು ಲಗತ್ತಿಸಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.