ADVERTISEMENT

ವರಿಷ್ಠರಿಗೆ ಜಿಂದಾಲ್‌ ಕಪ್ಪ ಸಲ್ಲಿಸಲು ವಿಜಯೇಂದ್ರ ದೆಹಲಿ ಭೇಟಿ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 12 ಮೇ 2021, 13:17 IST
Last Updated 12 ಮೇ 2021, 13:17 IST
   

ಶಿವಮೊಗ್ಗ: ಜಿಂದಾಲ್‌ಗೆ ಭೂಮಿ ನೀಡಿದ ಕಪ್ಪಕಾಣಿಕೆ ಸಲ್ಲಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿ ಅಮಿತ್‌ ಶಾ ಭೇಟಿಯಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ದೂರಿದರು.

ನವದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದರ ಹಿಂದೆ ರಾಜ್ಯದ ಹಿತಾಸಕ್ತಿ ಇಲ್ಲ. ಸ್ವಪಕ್ಷೀಯರ ವಿರೋಧದ ಮಧ್ಯೆಯೂ 3 ಸಾವಿರ ಎಕರೆ ಸರ್ಕಾರಿ ಭೂಮಿ ಜಿಂದಾಲ್‌ ಕಂಪನಿಗೆ ನೀಡಲಾಗಿದೆ. ಮುಂದೆ ಸಮಸ್ಯೆ ಎದುರಾದರೆ ಕೃಪೆ ಇರಲಿ ಎಂದು ವರಿಷ್ಠರಿಗೆ ಕಪ್ಪ ಸಲ್ಲಿಸಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ರಾಜ್ಯದಲ್ಲಿ ಲಸಿಕೆಯ ಕೊರತೆ ತೀವ್ರವಾಗಿದೆ. ಜಿಲ್ಲೆಯಲ್ಲಿಯೂ ಲಸಿಕೆಗಾಗಿ ಜನ ಕಾಯುವ ಪರಿಸ್ಥಿತಿ ಇದೆ. 2ನೇ ಡೋಸ್ ಲಸಿಕೆ ಪಡೆಯಲು ಜನ ಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. 5 ವಾರ ಕಳೆದರೆ ಮೊದಲನೆ ಡೋಸ್ ಪ್ರಯೋಜನಕ್ಕೆ ಬರುವುದಿಲ್ಲ. ಸರ್ಕಾರ ಅಗತ್ಯವಿರುವ ಲಸಿಕೆ ಪೂರೈಕೆಯಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ಲಸಿಕೆ ನೀಡದಿದ್ದರೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್‌ ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಬಂದಿದ್ದರೆ ಜನರಿಗೇಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜೀವ ಉಳಿಸುವತ್ತ ಗಮನ ನೀಡದೇ ಚಿತಾಗಾರ ಸಿದ್ಧಪಡಿಸುತ್ತಿದ್ದಾರೆ. ಸೋಂಕಿತರಿಗೆ ಸೌಲಭ್ಯಗಳಿಲ್ಲ. ಹಾಸಿಗೆ, ಆಮ್ಲಜನಕ ಸೌಲಭ್ಯಗಳಿಲ್ಲ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯೆ ಸಮನ್ವಯದ ಕೊರತೆ ಇದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸೌಗಂಧಿಕ ರಘುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.