
ಸೊರಬ: ಎಂಎಲ್ಸಿ ಗೋಮಧುಸೂದನ್ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಂಗಾರಧಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈಚೆಗೆ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಎಂಎಲ್ಸಿ ಗೋಮಧುಸೂಧನ್ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ದುರುಪಯೋಪಡೆಸಿಕೊಂಡು ರಾಜಕೀಯ ಮಾಡುತ್ತಿದೆ ಎಂಬ ಹೇಳಿಕೆ ಹಾಸ್ಯಾಸ್ಪದ. ಬಿಜೆಪಿ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ನೀಡುವ ಮೂಲಕ ಪಕ್ಷದ ಯೋಜನೆ ಕಾಪಿ ನಡೆಸಿ ರಾಜಕಾರಣ ಮಾಡುತ್ತಿದೆ. ಅವರ ಮಾತಿಗೂ, ಯೋಚನೆಗೂ ಅರ್ಥವೇ ಇಲ್ಲ. ಹರತಾಳು ಹಾಲಪ್ಪ ಸಚಿವ ಮಧು ಬಂಗಾರಪ್ಪ ಅವರು ಅರೆ ಬರೆ ಓದಿ ಸಚಿವರಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಪಿಎಚ್ಡಿ ಮಾಡಿದ ಅವರನ್ನು ಕ್ಷೇತ್ರದ ಜನತೆ ತಿರಸ್ಕರಿಸಿದ್ದಾರೆ. ಅಲ್ಲದೇ ಸಾಗರ-ಸೊರಬ ಕ್ಷೇತ್ರದ ಜನತೆ ಅವರನ್ನು ಗಡಿಪಾರು ಮಾಡಿದ್ದಾರೆ. ನಿರುದ್ಯೋಗಿಗಳಾದ ಅವರು ಹತಾಷೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಶುದ್ಧ ಸುಳ್ಳುಕೋರರು ಎಂದರೆ ಬಿಜೆಪಿಗರೇ. ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು.
ಸಚಿವ ಮಧು ಬಂಗಾರಪ್ಪ ಬಗ್ಗೆ ಹೇಳಿಕೆ ನೀಡಿದ ಹಾಲಪ್ಪ ಅವರ ನಡೆ ಖಂಡನಾರ್ಹ. ಅವರಿಗೆ ತಿಳುವಳಿಕೆ ಕೊರತೆಯಿದೆ. ರಾಜಕೀಯ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಲು ಶಿಕ್ಷಣ ಮುಖ್ಯವಲ್ಲ. ಬದಲಾಗಿ ಜನರ ನಾಡಿಮಿಡಿತ ಅರ್ಥೈಸಿಕೊಳ್ಳಬೇಕಿದೆ. ಅವರೇನು ರಾಜಕೀಯ ಪ್ರೊಫೇಸರ್ ಅಲ್ಲ. ಬಗರ್ ಹುಕುಂ ಹಾಗೂ ಶರಾವತಿ ಸಂತ್ರಸ್ಥರ ಪರ ಹೋರಾಟ ಮಾಡಿದವರು ಮಾಜಿ ಮುಖ್ಯಂಮತ್ರಿ ಬಂಗಾರಪ್ಪ ಬಿಟ್ಟರೆ ಮಧು ಬಂಗಾರಪ್ಪ ಅವರ ಸ್ಥಾನ ತುಂಬಲಿದ್ದಾರೆ. ಶರಾವತಿ ಸಂತ್ರಸ್ಥರ ಕುರಿತು ಚರ್ಚೆ ಹೋರಾಟ ನಡೆಸಿದವರು ಸಚಿವ ಮಧು ಬಂಗಾರಪ್ಪ. ಆದರೆ, ಬಿಜೆಪಿಗರು ಯಾವುದೇ ಸಭೆಯಾಗಲಿ, ಹೋರಾಟ ಮಾಡಲಿಲ್ಲ. ನಾನು ಸಂತ್ರಸ್ಥ ಎಂದು ಫೋಸ್ ಕೊಡುತ್ತಿರುವ ಹಾಲಪ್ಪ, ಬೇರೆ ಮುಖಂಡರ ಮೇಲೆ ಬೆರಳು ಮಾಡಿ ತೋರಿಸುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಾಲ್ಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಅಭಿವೃದ್ದಿಗೆ ₹ 2 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದು, ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಎಲ್ಲಿ ಮಾಡಿದ್ದಾರೆ. ಆ ಹಣ ಎಲ್ಲಿ ಹೋಯಿತು. ಸಚಿವರಾದ ಮಧು ಬಂಗಾರಪ್ಪ ಏತ ನೀರಾವರಿ ಹಾಗೂ ಬ್ರಿಡ್ಜ್–ಬ್ಯಾರೇಜ್ ನಿರ್ಮಾಣಕ್ಕಾಗಿ ಕೋಟ್ಯಾಂತರ ಅನುದಾನ ನೀಡಿ, ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದು, ತಾಲ್ಲೂಕಿಗೆ 5 ಕೆಪಿಎಸ್ ಶಾಲೆ ಮಂಜೂರು ಮಾಡಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ ಎಂದರು.
ಈ ವೇಳೆ ಪಕ್ಷದ ಮುಖಂಡ ತಬಲಿ ಬಂಗಾರಪ್ಪ, ಸುರೇಶ್ ಬಿಳವಾಣಿ, ಅಬ್ದುಲ್ ರಷೀದ್, ನಾಗರಾಜ್ ಚಿಕ್ಕಸವಿ, ಮೆಹಬೂಬ್, ನೆಹರೂ ಕೊಡಕಣೆ, ಶಿವಪ್ಪ, ಹಿರಿಯಣ್ಣ ಕಲ್ಲಂಬಿ, ಪ್ರಭು ಮೇಸ್ತ್ರಿ ಸೇರಿದಂತೆ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.