ಶಿವಮೊಗ್ಗ: ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಮೆಗ್ಗಾನ್ ಕೇಂದ್ರದ ಆರು ಸಿಬ್ಬಂದಿಯ ಅಮಾನತು ಆದೇಶವನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಹಿಂಪಡೆದಿದ್ದಾರೆ.
ಶುಶ್ರೂಷಕಿಯರಾದ ಚೇತನ ಕುಮಾರಿ, ಪವಿತ್ರಾ, ಭಾವನಾ, ಪುರುಷ ಶುಶ್ರೂಷಕ ರವಿ, ಡಿ ಗ್ರೂಪ್ ನೌಕರರಾದ ಪದ್ಮರಾಜ್, ಅರುಣ ಅವರನ್ನು ಸರ್ಕಾರದ ವಿರುದ್ಧ ಹೇಳಿಕೆ ನಿಡಿದ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು.
ಜಿಲ್ಲೆಯಲ್ಲಿ ಮೊದಲ ಬಾರಿ ಪತ್ತೆಯಾದ 8 ಮಂದಿ ಕೋವಿಡ್ ರೋಗಿಗಳ ಆರೈಕೆಗೆ ಈ ಸಿಬ್ಬಂದಿ ನೇಮಕವಾಗಿದ್ದರು. ಮೊದಲ 7 ದಿನಗಳು ರೋಗಿಗಳ ಆರೈಕೆಗೆ ನಿಯೋಜಿತವಾಗಿರುವ ತಂಡಕ್ಕೆ ಖಾಸಗಿ ವಸತಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಊಟ, ಸರಿಯಾದ ಸೌಕರ್ಯಗಳು ಇಲ್ಲವೆಂದು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಹಾಗಾಗಿ, ನಿರ್ದೇಶಕ ಡಾ.ಗುರುಪಾದಪ್ಪ ಅಮಾನತು ಮಾಡಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘ, ಆರೋಗ್ಯ ನೌಕರರ ಸಂಘದ ಒತ್ತಡಕ್ಕೆ ಮಣಿದು ಆದೇಶ ಹಿಂಪಡೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.