ಶಿವಮೊಗ್ಗ: ‘ಕೊರೊನಾ ಬಂದಾಗಿನಿಂದ ಹಲವು ಸಮಸ್ಯೆಗಳು ಎದುರಾಗಿವೆ. ಮನೆಯವರ ವಿರೋಧದ ನಡುವೆ ಕೆಲಸ ಮಾಡುತ್ತಿದ್ದೇನೆ’ ಎನ್ನುವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನರ್ಸ್ ಶಶಿಕಲಾ.
‘ಒಂದು ದಿನ ನಮ್ಮ ಸಿಬ್ಬಂದಿಯೊಬ್ಬರಿಗೆ ಅನಾರೋಗ್ಯ ಕಾರಣ ಅವರ ಅವಧಿಯಲ್ಲಿ ನನಗೆ ಕೆಲಸ ಮಾಡುವಂತೆ ಕೇಳಿಕೊಂಡರು. ತಕ್ಷಣ ಆಸ್ಪತ್ರೆಗೆ ಬರಬೇಕಾಗಿತ್ತು. ನಾನು ಭದ್ರಾವತಿಯಿಂದ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದೇನೆ. ಲಾಕ್ಡೌನ್ನಿಂದಾಗಿ ಅಂದು ಬಸ್ ವ್ಯವಸ್ಥೆ ಇರಲಿಲ್ಲ. ಆಸ್ಪತ್ರೆಯಿಂದಲೂ ಯಾವುದೇ ವಾಹನ ವ್ಯವಸ್ಥೆ ಇರಲಿಲ್ಲ. ಆದರೂ, ನನ್ನ ಸ್ಕೂಟಿಯಲ್ಲೆ ರಾತ್ರಿ ಆಸ್ಪತ್ರೆಗೆ ಬಂದು ಕೆಲಸ ಮಾಡಿದೆ. ಅವತ್ತು 6 ಗಂಟೆ ಅವಧಿ ಸೇವೆ ಇತ್ತು. ಆದರೆ, 12 ಗಂಟೆ ಸೇವೆ ಮಾಡಬೇಕಾಗಿ ಬಂತು. ಪಿಪಿಇ ಕಿಟ್ ಹಾಕಿಕೊಂಡು 6 ಗಂಟೆ ಕೆಲಸ ಮಾಡುವುದಕ್ಕೆ ಪ್ರಾಣ ಹೋದಂಗೆ ಆಗುತ್ತದೆ. ಆದರೂ, ಆ ದಿನ 12 ಗಂಟೆ ಪಿಪಿಇ ಕಿಟ್ ಹಾಕಿಕೊಂಡು ಸರಿಯಾಗಿ ಊಟ, ನೀರು ಇಲ್ಲದೆ ಕೆಲಸ ಮಾಡಬೇಕಾಯಿತು’.
‘ಮನೆಯಲ್ಲಿ ಅಪ್ಪನಿಗೆ ಬಿಪಿ ಇದೆ. ಅವರು ನಾನು ಸ್ವಲ್ಪ ತಡವಾಗಿ ಬಂದರೂ ಆತಂಕಕ್ಕೊಳಗಾಗುತ್ತಾರೆ. ಹೀಗಾಗಿ, ಮನೆಯಲ್ಲಿ ಮೊದಲೇ ಕೆಲಸ ಬೇಡ ಎನ್ನುತ್ತಿದ್ದಾರೆ. ಅದರಲ್ಲಿ ಇಷ್ಟೆಲ್ಲ ಸಮಸ್ಯೆ ಇರುವುದು ಗೊತ್ತಾದರೆ ಮನೆಯಲ್ಲಿ ಬೇಡವೇ ಬೇಡ ಎನ್ನುತ್ತಾರೆ. ಮನೆಯಲ್ಲಿ ಏನನ್ನೂ ಹೇಳದೆ ಅವರ ವಿರೋಧದ ನಡುವೆಯೂ ಕೆಲಸ ಮಾಡುತ್ತಿದ್ದೇನೆ’ ಎಂದು ನೋವು ತೋಡಿಕೊಂಡರು ಶಶಿಕಲಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.