ಸಾಗರ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು ಮೊಬೈಲ್ ಬಳಕೆದಾರರು ಎಚ್ಚರ ವಹಿಸಬೇಕು ಎಂದು ಶಿವಮೊಗ್ಗದ ಸೈಬರ್ ಅಪರಾಧ ಠಾಣೆ ಎಎಸ್ಐ ಪ್ರಕಾಶ್ ಜೆ.ಕೆ.ಹೇಳಿದರು.
ಸಮೀಪದ ಉಳ್ಳೂರು ಗ್ರಾಮದ ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಸಾಗರ ಗಂಗೋತ್ರಿ ಕಾನೂನು ಮಹಾ ವಿದ್ಯಾಲಯ, ಸೈಬರ್ ಅಪರಾಧ ಪೊಲೀಸ್ ಠಾಣೆಯ ಆಶ್ರಯದಲ್ಲಿ ಗುರುವಾರ ನಡೆದ ಸೈಬರ್ ಅಪರಾಧ ತಡೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಪರಿಚಿತರು ಮೊಬೈಲ್ ಫೋನ್ಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ವಿವರ ಕೇಳಿದರೆ ಯಾವುದೇ ಕಾರಣಕ್ಕೂ ಅದನ್ನು ನೀಡಬಾರದು. 24 ಗಂಟೆಯೊಳಗೆ ವಿವರ ನೀಡದಿದ್ದರೆ ಬ್ಯಾಂಕ್ ಖಾತೆ ರದ್ದಾಗುವುದು ಎಂದು ಬೆದರಿಕೆ ಹಾಕುವ ಸಂದೇಶಗಳನ್ನು ನಿರ್ಲಕ್ಷಿಸಬೇಕು’ ಎಂದರು.
ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಒಟಿಪಿ ಕಳಿಸುವಂತೆ ಕೇಳಿದರೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಫೋನ್ ಮಾಡಿ, ಖಾತರಿ ಪಡಿಸಿಕೊಳ್ಳಬೇಕು. ಈ ರೀತಿ ಒಟಿಪಿ, ಪಾಸ್ವರ್ಡ್ ಕೇಳಿ ಬ್ಯಾಂಕ್ ಖಾತೆಯಿಂದ ಹಣ ಎಗರಿಸುವ ವಂಚಕರ ಜಾಲ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಿವಿಧ ಅಂತರ್ಜಾಲ ಅಪರಾಧಗಳ ಕುರಿತು ಮಾಹಿತಿ ನೀಡಿದ ಸೈಬರ್ ಪೊಲೀಸ್ ಠಾಣೆ ಸಿಬ್ಬಂದಿ ಅರವಿಂದ್, ಯಾವುದೇ ವಂಚನೆಗೆ ಒಳಗಾದಲ್ಲಿ ಹಿಂಜರಿಕೆ ಮಾಡದೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು ಎಂದರು.
ದಿನಪತ್ರಿಕೆಗಳ ಓದಿನ ಮಹತ್ವದ ಕುರಿತು ‘ಪ್ರಜಾವಾಣಿ’ಯ ಹುಬ್ಬಳ್ಳಿಯ ಪ್ರಸರಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ನಾಯ್ಕ್ ಮಾತನಾಡಿದರು.
ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಎನ್. ಬಿಳಗಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಪ್ರಜಾವಾಣಿಯ ಪ್ರಸರಣ ವಿಭಾಗದ ನಂದಗೋಪಾಲ್, ನಾಗರಾಜ್ ಕೆ. ನಟೇಶ್ ಬಾಯರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.