
ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಆರಂಭಗೊಂಡು 2027ಕ್ಕೆ 75 ವರ್ಷಗಳು ಭರ್ತಿಯಾಗುತ್ತಿವೆ. ಈ ಸಂಭ್ರಮವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 50 ಶಾಖೆಗಳು ಕಾರ್ಯ ನಿರ್ವಹಿಸುವ ಗುರಿ ಇದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
‘ಪ್ರತಿ ಹೋಬಳಿಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಕಾರ್ಯ ನಿರ್ವಹಿಸಲಿದೆ. ದೇವಂಗಿ, ಮೇಗರವಳ್ಳಿ, ಕಟ್ಟೇಹಕ್ಕಲು, ಆರಗದಲ್ಲಿ ಶಾಖೆ ಶೀಘ್ರ ಆರಂಭಿಸಲಾಗುತ್ತಿದೆ. ಫೆ. 5ರಂದು ಎಪಿಎಂಸಿ ಆವರಣದ ಹೊಸ ಶಾಖೆ ಉದ್ಘಾಟನೆಗೊಳ್ಳಲಿದೆ’ ಎಂದು ಸೋಮವಾರ ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲೆಯಲ್ಲಿ 1.50 ಲಕ್ಷ ದಾಖಲೆ ಇರುವ ರೈತರಿದ್ದಾರೆ. ಈಗಾಗಲೇ 1.10 ಲಕ್ಷ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಮುಂದಿನ ವರ್ಷ ಶೇ 80ರಷ್ಟು ರೈತರನ್ನು ಬ್ಯಾಂಕ್ ವಹಿವಾಟು ತಲುಪಲಿದೆ. ಎಟಿಎಂ ಬಳಕೆ ಕಡಿಮೆಯಾಗುತ್ತಿದ್ದು ಎನ್ಪಿಸಿಐ ಅನುಮತಿ ಪಡೆಯಲಾಗಿದ್ದು, ಯುಪಿಐ ಸೇವೆ ಆರಂಭಿಸುತ್ತಿದ್ದೇವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
‘ನಬಾರ್ಡ್ ಪುನರ್ಧನ ಹಣ ಕಡಿಮೆಯಾಗಿದೆ. ವ್ಯವಹಾರದ ಶೇ 10ರಷ್ಟು ಮಾತ್ರ ಹಿಂದಿರುಗಿಸುತ್ತಿದ್ದಾರೆ. ಸ್ವಂತ ಸಂಪನ್ಮೂಲದಲ್ಲಿ ಸಹಕಾರಿ ಸಂಸ್ಥೆಗಳು ನಡೆಸುವುದು ಅನಿವಾರ್ಯವಾಗಿದೆ. ಕೇಂದ್ರ, ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದ ವಹಿವಾಟು ಕಷ್ಟವಾಗುತ್ತಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ₹600 ಕೋಟಿ ಸಾಲ ನೀಡಿದ್ದೆ. ಆದರೆ, ಈಗ ಅದು ಸಾಧ್ಯವಿಲ್ಲ. ಸಹಕಾರ ಸಂಸ್ಥೆ ಮುಕ್ತವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು’ ಎಂದರು.
‘ತಾಲ್ಲೂಕಿಗೆ ₹500 ಕೋಟಿ ವಿವಿಧ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಬೆಳೆ ಸಾಲ, ಮಧ್ಯಮ ಅವಧಿ, ಸ್ವಸಹಾಯ ಗುಂಪು, ಕೃಷಿಯೇತರ, ಮಾರ್ಕೆಟಿಂಗ್, ಜಮೀನು ಅಭಿವೃದ್ಧಿ ಸಾಲ ಸೇರಿ ಸಂಘ– ಸಂಸ್ಥೆಗಳಿಗೆ ನೆರವು ನೀಡಲಾಗಿದೆ. ಇದರಲ್ಲಿ ಶೇ 99ರಷ್ಟು ವಸೂಲಾತಿಯಾಗುತ್ತಿದೆ. ಸರ್ಕಾರದ ಯಾವುದೇ ಬಂಡವಾಳ ಇಲ್ಲದಿದ್ದರೂ ಡಿಸಿಸಿ ಬ್ಯಾಂಕ್ ಅನ್ನು ಸದೃಢವಾಗಿ ಕಟ್ಟಲಾಗಿದೆ’ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್. ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.