ತ್ಯಾಗರ್ತಿ: ತ್ಯಾಗರ್ತಿಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಸಾಗರ ತಾಲ್ಲೂಕಿನ ತ್ಯಾಗರ್ತಿಗೆ ಭಾನುವಾರ ಭೇಟಿ ನೀಡಿದ ಅವರು, ಶಾಖೆ ಆರಂಭಿಸಲು ಅವಶ್ಯವಿರುವ ಕಟ್ಟಡವನ್ನು ಪರಿಶೀಲಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
ನಬಾರ್ಡ್ನಿಂದ ಶೇ 8.5 ಬಡ್ಡಿದರದಲ್ಲಿ ಸಾಲ ದೊರೆಯುತ್ತಿದೆ. ಶೇ 6ರಷ್ಟು ಬಡ್ಡಿಯನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಶೇ 1.5ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದರೂ ಕೆಲವರು ಅಸಲು ಪಾವತಿಸದೇ ಸುಸ್ತಿದಾರರಾಗಿದ್ದಾರೆ. ಹಿಂದೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಈಗ ಜಮೀನಿನ ಹಿಡುವಳಿಗೆ ಅನುಗುಣವಾಗಿ ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ರೈತರ ಅಭ್ಯುದಯಕ್ಕಾಗಿ ತ್ಯಾಗರ್ತಿಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯನ್ನು ತೆರೆಯಲು ಅನುಮತಿ ದೊರೆತಿದ್ದು, ಇನ್ನು ಒಂದು ತಿಂಗಳೊಳಗಾಗಿ ಕಾರ್ಯಾರಂಭ ಮಾಡಲಿದೆ. ಸ್ಥಳೀಯರು ಹೆಚ್ಚಿನ ಠೇವಣಿ ನೀಡಿ ಸದಸ್ಯರಾಗಬೇಕು. ಅವಶ್ಯವಿರುವ ರೈತರು ಸಾಲ ಪಡೆದು ಹೆಚ್ಚಿನ ಅಭಿವೃದ್ಧಿ ಹೊಂದುವುದರೊಂದಿಗೆ ಬ್ಯಾಂಕ್ನ ಕಾರ್ಯ ಚಟುವಟಿಕೆಗಳಿಗೆ ನೆರವಾಗಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿಗಳಾದ ಲೋಕೇಶ್ ಹಾಗೂ ಸಂತೋಷ್, ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಕೆ.ಹನುಮಂತಪ್ಪ, ಉಪಾಧ್ಯಕ್ಷ ಕಿರಣ್ಕುಮಾರ್ ದೊಡ್ಮನೆ, ನಿರ್ದೇಶಕರಾದ ನಾಗೇಂದ್ರ, ಅಮೃತ್ರಾಜ್, ಲಿಂಗರಾಜು, ಆಶಾ ನಾಗಮಣಿ, ಇಸಾಕ್, ಲೋಕಪ್ಪ, ಕಾರ್ಯದರ್ಶಿ ಜೈಕುಮಾರ್, ಮುಖಂಡರಾದ ಹಮೀದ್ಖಾನ್, ಚೇತನ್ರಾಜ್ ಕಣ್ಣೂರು, ಸೋಮಶೇಖರ ಲಾವಿಗೆರೆ, ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್, ಸುಭಾಶ್ಚಂದ್ರ, ಮರಾಠಿ ಪರಶುರಾಮ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.