ADVERTISEMENT

ನದಿಯಲ್ಲಿ ಕೊಚ್ಚಿ ಹೋಗಿದ್ದ ಒಬ್ಬರ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:03 IST
Last Updated 14 ಅಕ್ಟೋಬರ್ 2019, 19:03 IST

ಶಿವಮೊಗ್ಗ: ಕುಮುದ್ವತಿ ನದಿಯಲ್ಲಿ ಎರಡು ತಿಂಗಳ ಹಿಂದೆ ಕೊಚ್ಚಿಹೋಗಿದ್ದ ಅಮರನಾಥ್ ಅವರ ಮೃತದೇಹ ಸೋಮವಾರ ದೊಡ್ಡಿಮಟ್ಟಿ ಬಳಿ ಪತ್ತೆಯಾಗಿದೆ.

ಕುಂಸಿ–ಚೋರಡಿ ಮಧ್ಯೆ ತುಂಬಿ ಹರಿಯುತ್ತಿದ್ದ ನದಿ ನೋಡಲು ಆ.10ರಂದು ಹೋಗಿದ್ದ ನಾಲ್ವರು ಸಾಗರ–ಶಿವಮೊಗ್ಗ ರಸ್ತೆಯಲ್ಲಿ ನಿರ್ಮಿಸಿರುವ ಹೊಸ ಸೇತುವೆಯ ಮೇಲೆ ನಿಂತಿದ್ದರು. ಆಗ ವೇಗವಾಗಿ ಬಂದ ಜೀಪ್‌ ಡಿಕ್ಕಿಯಾಗಿ ನದಿಗೆ ಬಿದ್ದಿದ್ದರು. ಅವರಲ್ಲಿ ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು.

ಮರುದಿನ ರಾಮಪ್ಪ ಅವರ ಶವ ನದಿ ತೀರದಲ್ಲೇ ಪತ್ತೆಯಾಗಿತ್ತು. ಉಳಿದವರ ಪತ್ತೆಗೆ ರಾಷ್ಟ್ರೀಯ ವಿಪತ್ತು ದಳ, ಮುಳುಗುತಜ್ಞರು ಹಲವು ವಾರಗಳು ನಡೆಸಿದ ಪ್ರಯತ್ನ ಫಲಕೊಟ್ಟಿರಲಿಲ್ಲ.

ADVERTISEMENT

ಘಟನೆ ನಡೆದ ಸ್ಥಳದಿಂದ 6 ಕಿ.ಮೀ. ದೂರದ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸ್ಥಳೀಯರಿಗೆ ಮೃತದೇಹ ಸಿಕ್ಕಿದೆ. ಮುಖ, ಕೈಕಾಲುಗಳನ್ನು ಜಲಚರಗಳು ತಿಂದಿವೆ.

ಕೈಯಲ್ಲಿದ್ದ ವಾಚು, ಧರಿಸಿದ್ದ ರೇನ್‌ಕೋಟ್, ಉಡುಪುಗಳ ಸಹಾಯದಿಂದ ಕುಟುಂಬದ ಸದಸ್ಯರು ಮೃತರನ್ನು ಪತ್ತೆಹಚ್ಚಿದ್ದಾರೆ. ಅಂದೇ ನೀರು ಪಾಲಾಗಿದ್ದ ಚೋರಡಿ ಸಮೀಪದ ಸನ್ನಿವಾಸದ ಹರೀಶ್ ಇನ್ನೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.