ADVERTISEMENT

ಟೀಕೆಗೆ ಕ್ಷೇತ್ರದ ಅಭಿವೃದ್ಧಿಯೇ ಉತ್ತರ: ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು

ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:42 IST
Last Updated 28 ಜನವರಿ 2023, 6:42 IST
ತೀರ್ಥಹಳ್ಳಿಯ ಕುರುವಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ತೀರ್ಥಹಳ್ಳಿಯ ಕುರುವಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.   

ತೀರ್ಥಹಳ್ಳಿ: ‘ಬೇರೆ ಯಾರದ್ದೋ ಕೂಸಿಗೆ ಅಪ್ಪ ಆಗುವ ಭಂಡತನ ನನಗಿಲ್ಲ. ನನಗೆ ಶಕ್ತಿ, ಸರ್ಕಾರ ಎರಡೂ ಇದೆ. ಅಭಿವೃದ್ಧಿಗೆ ಹಣ ನೀಡಿ ರಸ್ತೆ, ಸೇತುವೆ, ಸಮುದಾಯ ಭವನ ನಿರ್ಮಿಸಿದ್ದೇನೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ಪಟ್ಟಣದ ಕೋಳಿಕಾಲು ಗುಡ್ಡದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ 34 ಫಲಾನುಭವಿಗಳಿಗೆ ಆಶ್ರಯ ಹಕ್ಕುಪತ್ರ ವಿತರಣೆ ಹಾಗೂ ಕುರುವಳ್ಳಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕೆಲವರಿಗೆ ರಾಜಕಾರಣ ಎಂದರೆ ಕೇವಲ ಬುದ್ಧಿವಂತಿಕೆ. ಆಡಂಬರ ಮಾತ್ರ. ನನಗೆ ಅಭಿವೃದ್ಧಿ. ಟೀಕೆಗೆ ಅಭಿವೃದ್ಧಿಯಿಂದ ಉತ್ತರ ನೀಡಿದ್ದೇನೆ’ ಎಂದು ತಮ್ಮನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಹಿಂದಿನ 10 ವರ್ಷಗಳಲ್ಲಿ ಆಗದಿರುವ ಕೆಲಸಗಳನ್ನು ನಾಲ್ಕೂವರೆ ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ. 500 ಜನ ನಿರಾಶ್ರಿತರು, ವಸತಿರಹಿತರಿಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ. ಕೆಲವರು ವಿಠಲನಗರ ಸಮೀಪ ನಿರ್ಮಾಣವಾಗುತ್ತಿದ್ದ ನಿವೇಶನಕ್ಕೆ ಅಡ್ಡಿ ಮಾಡಿದ್ದರು. ಬಡವರ ಬದುಕಿನಲ್ಲೂ ಸ್ವಾರ್ಥ ಬೆರೆಸಿದರು’ ಎಂದರು.

‘ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗಾಗಿ ₹ 11.5 ಕೋಟಿ ವೆಚ್ಚದಲ್ಲಿ 53 ಕಾಮಗಾರಿಗಳಿಗೆ ಅನುದಾನ ನೀಡಿದ್ದೇನೆ. ವಿರೋಧ
ಪಕ್ಷದವರು ಫೆಬ್ರುವರಿಯಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ 5 ಕೊಳಚೆ ಪ್ರದೇಶಗಳನ್ನು ಗುರುತಿಸಿದ್ದು, ಅವುಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಿಸಿದ್ದೇನೆ’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಸಂದೇಶ ಜವಳಿ, ಬಿ.ಗಣಪತಿ, ನವೀನ್‌, ಮಂಜುಳಾ, ಜ್ಯೋತಿ, ನಮ್ರತ್‌, ರವೀಶ್‌, ದಯಾನಂದ, ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.