ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಸೂಡಾ) ವಿವಿಧ ಬಡಾವಣೆಗಳಲ್ಲಿ ಉದ್ಯಾನ ಅಭಿವೃದ್ದಿ ಸೇರಿದಂತೆ ಬೇರೆ ಬೇರೆ ಕಾಮಗಾರಿಗಳ ಕೈಗೊಳ್ಳುತ್ತಿದೆ. ನಗರದ ನಿವಾಸಿಗಳು ಉದ್ಯಾನಗಳ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಪಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಸಲಹೆ ನೀಡಿದರು.
ಪ್ರಾಧಿಕಾರದಿಂದ ಕೈಗೆತ್ತಿಕೊಂಡಿರುವ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಮನೆಯ ಸುತ್ತಲೂ ಗಿಡಗಳ ನೆಟ್ಟು ಬೆಳೆಸಬೇಕು. ಇದರಿಂದ ಬೇಸಿಗೆಯಲ್ಲಿ ತಂಪು ವಾತಾವರಣ ಇರಲಿದೆ. ನಗರದ ಸೌಂದರ್ಯವೂ ಹೆಚ್ಚುತ್ತದೆ ಎಂದರು.
ಗಾಡಿಕೊಪ್ಪದ ಸಿದ್ದಪ್ಪ ಬಡಾವಣೆಯಲ್ಲಿ ಅಂದಾಜು ₹25 ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ನಾಲ್ಕು ಡೆಕ್ಸ್ಲ್ಯಾಬ್ ಹಾಗೂ 45 ಮೀಟರ್ ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ, 280 ಮೀಟರ್ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು ಎಂದರು.
ವಿದ್ಯಾನಗರದ ಗ್ರಂಥಾಲಯ ಹತ್ತಿರದ ಉದ್ಯಾನಕ್ಕೆ ₹20 ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಪೂಜೆ ನೆರವೇರಿಸಿ, ಇಲ್ಲಿಯ ಉದ್ಯಾನದಲ್ಲಿ ಪ್ಲಾಟ್ಫಾರ್ಮ್ ನಿರ್ಮಾಣದೊಂದಿಗೆ ವ್ಯಾಯಾಮ ಸಾಮಗ್ರಿ ಅಳವಡಿಕೆ, ಪಾರ್ಕ್ನಲ್ಲಿ ಹಾಲಿ ಇರುವ ಪಾಥ್ ವೇ ಮತ್ತು ಗ್ರಿಲ್ ಫೆನ್ಸಿಂಗ್ಗೆ ಬಣ್ಣ ಲೇಪಿಸುವುದು ಹಾಗೂ ಉದ್ಯಾನದಲ್ಲಿ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ನಿವಾಸಿಗಳು ತಮ್ಮ ಬಡಾವಣೆಗಳಲ್ಲಿನ ಉದ್ಯಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಮನೆ ಸುತ್ತಮುತ್ತ ಗಿಡಗಳ ನೆಟ್ಟು ಪೋಷಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಕಾರ್ಯಪಾಲಕ ಎಂಜಿನಿಯರ್ ಗಂಗಾಧರ ಸ್ವಾಮಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.